ಕೇಂದ್ರದಿಂದ ಕಲ್ಯಾಣ ಸಂಸ್ಥೆಗಳು-ಹಾಸ್ಟೆಲ್ಗಳಿಗೆ ಆಹಾರ ಧಾನ್ಯ ಸ್ಥಗಿತ: ಯು.ಟಿ.ಖಾದರ್
ಬೆಂಗಳೂರು, ಫೆ.7: ಕಲ್ಯಾಣ ಸಂಸ್ಥೆಗಳು ಹಾಗೂ ಹಾಸ್ಟೆಲ್ಗಳಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಆಹಾರ ಧಾನ್ಯ ಪೂರೈಕೆಯನ್ನು ಸ್ಥಗಿತಗೊಳಿಸಿರುವ ಕೇಂದ್ರ ಸರಕಾರದ ಕ್ರಮ ಅತ್ಯಂತ ಖಂಡನೀಯ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ತುರ್ತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವೃದ್ಧಾಶ್ರಮ, ಭಿಕ್ಷುಕರ ಪುನವರ್ಸತಿ ಕೇಂದ್ರ ಸೇರಿದಂತೆ ಇನ್ನಿತರ ಕಲ್ಯಾಣ ಸಂಸ್ಥೆಗಳು ಹಾಗೂ ಎಸ್ಸಿ-ಎಸ್ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳಿಗೆ ಆಹಾರ ಧಾನ್ಯ ಪೂರೈಸುವ ಯೋಜನೆಗಳನ್ನು ವಿಲೀನಗೊಳಿಸಿ, ಏಕಾಏಕಿ ಪಡಿತರ ಸ್ಥಗಿತಗೊಳಿಸುವ ಮುನ್ನ ರಾಜ್ಯ ಸರಕಾರದ ಜೊತೆ ಚರ್ಚೆಯೂ ನಡೆಸಿಲ್ಲ ಎಂದು ಹೇಳಿದರು.
ಆಹಾರ ಧಾನ್ಯ ಪೂರೈಸುವ ಯೋಜನೆಗಳನ್ನು ವಿಲೀನಗೊಳಿಸುವ ನೆಪದಲ್ಲಿ ಈ ವರ್ಗದ ಬಡವರನ್ನು ಕೇಂದ್ರ ಸರಕಾರ ಶತ್ರುಗಳಂತೆ ಕಾಣುತ್ತಿದೆ. ರಾಜ್ಯಕ್ಕೆ ಪ್ರತಿ ತಿಂಗಳು 1.41 ಲಕ್ಷ ಕ್ವಿಂಟಾಲ್ ಅಕ್ಕಿ, 71 ಸಾವಿರ ಕ್ವಿಂಟಲ್ ಗೋಧಿಯನ್ನು ವಿದ್ಯಾರ್ಥಿ ನಿಲಯಗಳಿಗೆ ಪೂರೈಕೆಯಾಗುವುದನ್ನು ಕೇಂದ್ರ ಸರಕಾರ ತಡೆ ಹಿಡಿದಿದೆ. ಇದರಿಂದಾಗಿ, ರಾಜ್ಯಕ್ಕೆ ಸುಮಾರು 6-7 ಕೋಟಿ ರೂ.ಆರ್ಥಿಕ ಹೊರೆಯಾಗಿದೆ ಎಂದು ಖಾದರ್ ಹೇಳಿದರು.
ಎರಡೂ ಯೋಜನೆಗಳನ್ನು ವಿಲೀನಗೊಳಿಸಿ ಕೇಂದ್ರ ಸರಕಾರಕ್ಕೆ ಅಗತ್ಯ ಮಾಹಿತಿಯನ್ನು ನೀಡಲು ಆಹಾರ ಇಲಾಖೆಯ ಆಯುಕ್ತರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ಖಾದರ್ ಮಾಹಿತಿ ನೀಡಿದರು.
ಕೇಂದ್ರ ಸರಕಾರಕ್ಕೆ ಕೆಳ ವರ್ಗದ ಜನರ ಬಗ್ಗೆ ಕನಿಕರ, ಕಾಳಜಿಯಿಲ್ಲ. ಇದರಿಂದಾಗಿ ಈ ರೀತಿ ವರ್ತಿಸುತ್ತಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲೇ ಪಡಿತರ ವ್ಯವಸ್ಥೆಯಲ್ಲಿ ಹೆಚ್ಚು ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗಿದೆ ಎಂದರು.
ಕೇಂದ್ರ ಸರಕಾರದಿಂದ ಹೊಸ ಮಾರ್ಗಸೂಚಿಗಳನ್ನು ಹಿಂದಿನ ಸಾಲಿನ ಅಕ್ಟೋಬರ್ ತಿಂಗಳಲ್ಲಿ ಸ್ವೀಕರಿಸಲಾಗಿದ್ದು, ತದನಂತರ ಮಾಹಿತಿಯನ್ನು ಪಡೆಯಲು ಕ್ರಮ ವಹಿಸಲಾಗಿದೆ. ಆದರೂ, ಅಕ್ಟೋಬರ್ನಲ್ಲಿ ಕಲ್ಯಾಣ ಸಂಸ್ಥೆಗಳು ಹಾಗೂ ಹಾಸ್ಟೆಲ್ಗಳಿಗೆ ಆಹಾರ ಧಾನ್ಯಗಳ ಹಂಚಿಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಖಾದರ್ ಆರೋಪಿಸಿದರು.
ರಾಜ್ಯ ಸರಕಾರವು 6 ಸಾವಿರ ಹಾಸ್ಟೆಲ್ ಹಾಗೂ 400 ಕಲ್ಯಾಣ ಸಂಸ್ಥೆಗಳನ್ನು ನಡೆಸುತ್ತಿರುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಆಹಾರ ಧಾನ್ಯಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಲಾಗುತ್ತಿದೆ. ಈವರೆಗೂ ತ್ರಿಪುರ, ಜಮ್ಮು ಮತ್ತು ಕಾಶ್ಮೀರ, ಹರಿಯಾಣ ರಾಜ್ಯಗಳು ಮಾತ್ರ ಮಾಹಿತಿಯನ್ನು ಸಲ್ಲಿಸಿವೆ. ಕೇಂದ್ರ ಸರಕಾರ ಕೋರಿರುವ ಮಾಹಿತಿಯನ್ನು ಈಗಾಗಲೆ ನಾವು ಕಳುಹಿಸಿದ್ದೇವೆ ಎಂದು ಅವರು ಹೇಳಿದರು.
ರಾಜ್ಯ ಸರಕಾರವು ಆಹಾರ ಧಾನ್ಯಗಳ ಬಳಕೆಯ ಕುರಿತು ಬಳಕೆ ಪ್ರಮಾಣ ಪತ್ರವನ್ನು ಕೇಂದ್ರ ಸರಕಾರಕ್ಕೆ ಕಾಲಕಾಲಕ್ಕೆ ಸಲ್ಲಿಸಿದೆ. 2017ರ ಸೆಪ್ಟಂಬರ್ ತಿಂಗಳ ಬಳಕೆ ಪ್ರಮಾಣ ಪತ್ರವನ್ನು ಸಲ್ಲಿಸಲಾಗಿದೆ. ಈವರೆಗೂ ಕಲ್ಯಾಣ ಸಂಸ್ಥೆಗಳ ಹಾಗೂ ಹಾಸ್ಟೆಲ್ಗಳಿಗೆ ಹಂಚಿಕೆಯಾಗುವ ಆಹಾರ ಧಾನ್ಯಗಳ ಮಾರ್ಗಾಂತರವು ಆಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮಾಧ್ಯಮಗಳಲ್ಲಿ ಪ್ರಕಟಿಸಲಾದ ಸುದ್ದಿಯು ಸತ್ಯಕ್ಕೆ ದೂರವಾಗಿದ್ದು, ರಾಜ್ಯ ಸರಕಾರವು ರಾಷ್ಟ್ರೀಯ ಆಹಾರ ಭದ್ರತೆ ನಿಯಮದಂತೆ ಜಾಗೃತಿ ಸಮಿತಿಗಳು ಹಾಗೂ ಸಾಮಾಜಿಕ ಲೆಕ್ಕ ಪರಿಶೋಧನೆ ನಡೆಸಿ, ಸಾರ್ವಜನಿಕ ವಿತರಣಾ ಪದ್ಧತಿಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಂಡಿದೆ ಎಂದು ಖಾದರ್ ಹೇಳಿದರು.
ಅನಿಲ ಭಾಗ್ಯ ಯೋಜನೆ: ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಜಾರಿಗೆ ಸರಕಾರ ಬದ್ಧವಾಗಿದೆ. ಈಗಾಗಲೇ ಫಲಾನುಭವಿಗಳ ಆಯ್ಕೆಯಾಗಿದ್ದು, ಮುಖ್ಯಮಂತ್ರಿಯಿಂದ ಅಭಿನಂದನಾ ಪತ್ರವನ್ನು ಕಳುಹಿಸಲಾಗಿದೆ. ಶೀಘ್ರದಲ್ಲೇ ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಖಾದರ್ ತಿಳಿಸಿದರು.
ಆಂಧ್ರಪ್ರದೇಶ ಸರಕಾರದ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಪೆಟ್ರೋಲ್/ಡಿಸೇಲ್ ಬಂಕ್ಗಳು ಹಾಗೂ ಗ್ಯಾಸ್ ಸ್ಟೇಷನ್ ಸ್ಥಾಪನೆಗೆ ರಾಜ್ಯ ಸರಕಾರದ ಪರವಾನಗಿ ಪಡೆಯುವುದನ್ನು ಕಡ್ಡಾಯಗೊಳಿಸುವ ಸಂಬಂಧ ಕಾನೂನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದರು.