ಪ್ರಧಾನಿ ಮೋದಿ ಬಸವಣ್ಣ ತತ್ವ ಅಳವಡಿಸಿಕೊಳ್ಳಲಿ: ಎಸ್.ಆರ್. ಪಾಟೀಲ್
ಬಳ್ಳಾರಿ, ಫೆ. 10: ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಹರಿಕಾರ ಬಸವಣ್ಣ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಜಾತ್ಯತೀತವಾಗಿ ಬದುಕು ರೂಪಿಸಿಕೊಳ್ಳಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ್ ಹೇಳಿದರು.
ಶನಿವಾರ ಬಳ್ಳಾರಿಯ ಹೊಸಪೇಟೆಯಲ್ಲಿ ಕೆಪಿಸಿಸಿ ಆಯೋಜಿಸಿರುವ 'ಜನಾರ್ಶಿವಾದ ಯಾತ್ರೆ' ಚಾಲನೆ ಆರಂಭಕ್ಕೂ ಮುನ್ನಾ ಅವರು ಮಾತನಾಡಿದರು.
ಸಾಮಾಜಿಕ ನ್ಯಾಯಕ್ಕಾಗಿ ಬಸವಣ್ಣ ಶ್ರಮಿಸಿದ್ದರು. ಇದೇ ಸಿದ್ಧಾಂತಗಳನ್ನು ಅಳವಡಿಸಿಕೊಂಡಿರುವ ರಾಜ್ಯ ಕಾಂಗ್ರೆಸ್ ಸರಕಾರ ಜನಪ್ರಿಯ ಯೋಜನೆ ಗಳನ್ನು ಜಾರಿಗೆ ತಂದು, ಯಶಸ್ವಿಯಾಗಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಬಸವಣ್ಣ ಅವರನ್ನು ನೆನಪು ಮಾಡಿಕೊಳ್ಳುತ್ತಾರೆ ಹೊರತು, ಅವರ ತತ್ವಗಳನ್ನು ಅಳವಡಿಸಿಕೊಂಡಿಲ್ಲ. ಇನ್ನು, ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ, ಜಾತ್ಯತೀತ ತತ್ವದ ವಿರುದ್ಧವಾಗಿದ್ದಾರೆ ಎಂದ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಯೋಜನೆಗಳು ಪ್ರತಿ ಗ್ರಾಮಕ್ಕೂ ತಲುಪಿದ್ದು, ಮುಂದೆ ನಮ್ಮದೇ ಸರಕಾರ ಆಡಳಿತಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.