ಬೆಂಗಳೂರು: ದರೋಡೆಗೆ ಸಂಚು; ಮೂವರು ಆರೋಪಿಗಳ ಸೆರೆ
ಬೆಂಗಳೂರು, ಫೆ. 13: ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆಗೆ ಸಂಚು ರೂಪಿಸುತ್ತಿದ್ದ ಆರೋಪದ ಮೇಲೆ ಇಲ್ಲಿನ ಸಿಸಿಬಿ ಪೊಲೀಸರು ಮೂರು ಮಂದಿ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಬಾಗಲಗುಂಟೆಯ ತೇಜಸ್(25), ವಿದ್ಯಾರಣ್ಯಪುರ ರಾಘವೇಂದ್ರ ಕಾಲನಿಯ ನಿವಾಸಿ ಲೋಕೇಶ್(20) ಹಾಗೂ ಮಲ್ಲೇಶ್ವರಂನ ಆರಿಫ್(20) ಎಂದು ಗುರುತಿಸಲಾಗಿದೆ. ಆರೋಪಿಗಳು ವಿದ್ಯಾರಣ್ಯಪುರದ ಜಲ್ಲಿ ಮಿಷನ್ ವೃತ್ತದ ಡಿಫೆನ್ಸ್ ಲೇಔಟ್ ಬಳಿ ಮಾರಕಾಸ್ತ್ರಗಳನ್ನಿಟ್ಟುಕೊಂಡು ದರೋಡೆಗೆ ಸಂಚು ಮಾಡುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ರೌಡಿ ಶ್ರೀಕಾಂತ ಯಾನೆ ಊಸಾನ ಸಹಚರರು ಎಂದು ಹೇಳಲಾಗಿದೆ.
ಈ ಸಂಬಂಧ ವಿದ್ಯಾರಣ್ಯಪುರ ಠಾಣಾ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.
Next Story