ಬೆಂಗಳೂರು: ಜನಮನ ಗೆದ್ದ ‘ಹಸಿರು ಗ್ರಾಹಕ ಮೇಳ’
ಬೆಂಗಳೂರು, ಫೆ.24: ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್(ಐಜಿಬಿಸಿ) ಹಾಗೂ ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಸಹಯೋಗದಲ್ಲಿ ನಗರದ ಎಂಜಿ ರಸ್ತೆಯ ಮೆಟ್ರೋ ರಂಗೋಲಿ ಆವರಣದಲ್ಲಿ ಆಯೋಜಿಸಿದ್ದ ಐಜಿಬಿಸಿ ವೇವ್ಸ್ 2018 ಹೆಸರಿನ ‘ಹಸಿರು ಗ್ರಾಹಕ ಮೇಳ’ ನಾಗರಿಕರು ಹಾಗೂ ವಿದ್ಯಾರ್ಥಿಗಳನ್ನು ಆಕರ್ಷಿಸಿದೆ.
ಹಸಿರು ಪರಿಸರ ನಿರ್ಮಾಣದ ಉದ್ದೇಶದಿಂದ ಶನಿವಾರ ಆಯೋಜಿಸಿದ್ದ ಹಸಿರು ಗ್ರಾಹಕ ಮೇಳಕ್ಕೆ ನಗರದ ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ, ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್(ಐಜಿಬಿಸಿ) ಬೆಂಗಳೂರು ಘಟಕದ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ, ಚಂದ್ರಶೇಖರ್ ಹರಿಹರನ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಡಿಸಿಪಿ ಚಂದ್ರಗುಪ್ತ, ಪರಿಸರ ಸಂರಕ್ಷಣೆ ಪ್ರತಿಯೊಬ್ಬ ಜವಾಬ್ದಾರಿಯಾಗಿದೆ. ಪರಿಸರದ ಕುರಿತು ಇಂತಹ ಹಸಿರು ಗ್ರಾಹಕ ಮೇಳ ಆಯೋಜಿಸಿರುವುದರಿಂದ ಎಲ್ಲರಿಗೂ ಮಾಹಿತಿ ದೊರೆಯಲಿದೆ. ಅದೇ ರೀತಿ, ಹೊಸ ತಂತ್ರಜ್ಞಾನ ಬಳಕೆಯಿಂದಲೂ ನೀರು ಉಳಿಸುವ ಬಗ್ಗೆಯೂ ಇಲ್ಲಿ ಮಾಹಿತಿ ನೀಡಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಯ್ಯದ್ ಮುಹಮ್ಮದ್ ಬ್ಯಾರಿ ಮಾತನಾಡಿ, ಈ ಮೇಳದಲ್ಲಿ ಯುವಕರು ಹೆಚ್ಚಾಗಿ ಪಾಲ್ಗೊಂಡಿರುವುದು ಸಂತಸ ತಂದಿದೆ. ಇಂತಹ ಪರಿಸರ ಪ್ರೇಮಿ ಮೇಳಗಳನ್ನು ಬೇರೆ ಕಡೆಯೂ ಆಯೋಜಿಸುವ ಚಿಂತನೆ ನಡೆಸಲಾಗಿದ್ದು, ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು. ಮೇಳದಲ್ಲಿ ಪ್ರದರ್ಶನ-ಮಾರಾಟ ಮಾತ್ರವಲ್ಲದೆ, ವಿವಿಧ ವಿಷಯಗಳ ಕುರಿತು ತಜ್ಞರ ಜೊತೆ ನೇರ ಸಂವಾದ ಆಯೋಜಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿ ದೊರೆಯಲಿದ್ದು, ಪ್ರಕೃತಿದತ್ತ ವಿಧಾನಗಳನ್ನು ಬಳಸಿ ಪರಿಸರ, ವಿಜ್ಞಾನದ ಸಮಸ್ಯೆಗಳನ್ನು ನಿವಾರಿಸಲು ಈ ಮೇಳ ಸಹಯಕಾರಿಯಾಗಿದೆ ಎಂದು ನುಡಿದರು.
ಮೇಳ ವಿಶೇಷ: ಬೆಳಗ್ಗೆ 9:30ರಿಂದ ಆರಂಭಗೊಂಡ ಈ ಮೇಳದಲ್ಲಿ ಬಿಪ್ಯಾಕ್, ಬಿಎಎಫ್ ಸೇರಿ ಹಲವಾರು ಖಾಸಗಿ ಸಂಸ್ಥೆಗಳು, ಶಾಲಾ ಕಾಲೇಜು ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು, ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ಪಡೆಯುವ ಜೊತೆಗೆ ನೀರು ಉಳಿಸುವ ಕುರಿತು ಹೊಸ ಯಂತ್ರೋಪಕರಣಗಳ ಕಾರ್ಯವನ್ನು ಅಚ್ಚರಿಯಿಂದ ವೀಕ್ಷಿಸಿದರು.
60 ಮಳಿಗೆಗಳು: ನೀರಿನ ನಿರ್ವಹಣೆ, ತ್ಯಾಜ್ಯ ನಿರ್ವಹಣೆ, ಸಾವಯವ ಬೇಸಾಯ, ಇಂಧನ ನಿರ್ವಹಣೆ, ಅಡುಗೆ ಶಕ್ತಿಗಳನ್ನು ಜೈವಿಕ ಅನಿಲಗಳ ಮೇಲೆ ಕೇಂದ್ರೀಕರಿಸುವ ಬಗ್ಗೆ ಮಾಹಿತಿ ನೀಡಲು 60ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿತ್ತು. ಸಾವಿರಾರು ನಾಗರಿಕರು ಇಲ್ಲಿ ಮಾಹಿತಿ ಪಡೆದರು.