ಬೆಂಗಳೂರು: ಪರೀಕ್ಷಾ ಭಯದಿಂದ ಎಸೆಸೆಲ್ಸಿ ವಿದ್ಯಾರ್ಥಿ ಪರಾರಿ; ಪ್ರಕರಣ ದಾಖಲು
ಬೆಂಗಳೂರು, ಮಾ.23: ಎಸೆಸೆಲ್ಸಿ ಪರೀಕ್ಷಾ ಭೀತಿಯಿಂದ ವಿದ್ಯಾರ್ಥಿಯೊಬ್ಬ ಮನೆ ಬಿಟ್ಟು ಪರಾರಿಯಾಗಿರುವ ಘಟನೆ ಮಾಗಡಿ ರಸ್ತೆಯ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಸುಂಕದಕಟ್ಟೆಯ ಸಮೀಪದ ಮಹದೇಶ್ವರ ನಗರದ ನಿವಾಸಿ ಬಿ.ಕೃಷ್ಣಮೂರ್ತಿರವರ ಪುತ್ರ ಮಹೇಶ್(16)ಮನೆಯಿಂದ ಪರಾರಿಯಾಗಿರುವ ವಿದ್ಯಾರ್ಥಿ. ಇಂದಿನಿಂದ ರಾಜ್ಯಾದ್ಯಂತ ಎಸೆಸೆಲ್ಸಿ ಪರೀಕ್ಷೆ ಪ್ರಾರಂಭವಾಗಿದೆ. ಪರೀಕ್ಷೆಗೆ ಬುಧವಾರ ಸಂಜೆವರೆಗೆ ಕಠಿಣ ಅಭ್ಯಾಸದಲ್ಲಿ ತೊಡಗಿದ್ದ. ಆದರೆ, ರಾತ್ರಿ 7ರ ನಂತರ ಕಾಣೆಯಾಗಿದ್ದಾನೆ ಎಂದು ಬಿ.ಕೃಷ್ಣಮೂರ್ತಿ ತಿಳಿಸಿದರು.
ನನ್ನ ಮಗ ಚೆನ್ನಾಗಿಯೆ ಓದುತ್ತಿದ್ದ. ಇಂದು ಕನ್ನಡ ಪರೀಕ್ಷೆ ಇದ್ದುದರಿಂದ ಬುಧವಾರ ಬೆಳಗ್ಗೆಯಿಂದಲೆ ನಿರಂತರವಾಗಿ ಓದುತ್ತಿದ್ದ. ನಾವು ಸಹ ಆತನೊಂದಿಗೆ ಮಾತನಾಡಿ ಪರೀಕ್ಷೆಗೆ ಭಯ ಪಡುವ ಅಗತ್ಯವಿಲ್ಲವೆಂದು ಧೈರ್ಯ ತುಂಬಿದ್ದೆವು. ಆದರೆ, ಬುಧವಾರ ಸಂಜೆಯ ನಂತರ ಮನೆಬಿಟ್ಟು ಹೋಗಿದ್ದಾನೆ ಎಂದು ಅವರು ಶೋಕ ವ್ಯಕ್ತಪಡಿಸಿದರು.
ಪ್ರಕರಣವನ್ನು ದಾಖಲಿಸಿಕೊಂಡಿರುವ ಬ್ಯಾಡರಹಳ್ಳಿ ಠಾಣೆಯ ಪೊಲೀಸರು ವಿದ್ಯಾರ್ಥಿಯ ಹುಡುಕಾಟದ ಹಿನ್ನೆಲೆಯಲ್ಲಿ ತನಿಖೆ ಪ್ರಾರಂಭಿಸಿದ್ದಾರೆ. ವಿದ್ಯಾರ್ಥಿಯ ಸುಳಿವು ಸಿಕ್ಕಲ್ಲಿ ದೂ. 9945246714, 9880885345, 9900330724 ಹಾಗೂ 9740866871 ಸಂಪರ್ಕಿಸಲು ಕೋರಲಾಗಿದೆ.