ರಾಹುಲ್ ಗಾಂಧಿಗೆ ಕುಮಾರಸ್ವಾಮಿ ತಿರುಗೇಟು
ಬೆಂಗಳೂರು, ಮಾ.24: ಜೆಡಿಎಸ್ ಪಕ್ಷವು ಬಿಜೆಪಿಯ ‘ಬಿ’ ಟೀಂ ಎಂದು ಕರೆದಿದ್ದು ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ತಿರುಗೇಟು ನೀಡಿದ್ದಾರೆ.
‘ರಾಹುಲ್ಗಾಂಧಿ ಅವರೇ ಚಾಮುಂಡಿ ತಾಯಿಯ ನಾಡು ಮೈಸೂರಿಗೆ ಬಂದಿದ್ದೀರಿ. ಚಾಮುಂಡಿ ಸನ್ನಿಧಿಗೆ ಹೋಗುತ್ತಿದ್ದೀರಿ ಎಂದು ತಿಳಿಯಿತು. ನೀವು ನಂಬಿದ ಢೋಂಗಿ ಸಿದ್ಧಾಂತಗಳು ದೇಶಾದ್ಯಂತ ನಿಮಗೆ ಕೊಟ್ಟ ಹೊಡೆತಕ್ಕೆ ನಲುಗಿ, ಹಿಂದಿನ ನಾಸ್ತಿಕತೆಯನ್ನು ಬಿಟ್ಟು ಈಗ ಬಿಜೆಪಿಯವರಂತೆ ಕಪಟ ಭಕ್ತಿ ಪ್ರದರ್ಶಿಸುತ್ತಾ ಟೆಂಪಲ್ ರನ್ ಕೈಗೊಂಡಿದ್ದೀರಿ. ಆಗಲಿ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ನನಗಾದ ಶಸ್ತ್ರಚಿಕಿತ್ಸೆ ನಂತರ ನಾನು ಪುನಃ ರಾಜಕೀಯ ಆರಂಭಿಸಲು ಪ್ರೇರಣೆ ನೀಡಿದ ಆ ತಾಯಿ ಚಾಮುಂಡಿಯು ನಿಮ್ಮ ಅಪ್ರಬುದ್ಧತೆಯನ್ನು ನೀಗಿಸಲಿ ಎಂದು ಆಶಿಸುತ್ತೇನೆ. ಎಲ್ಲಕ್ಕಿಂತ ಪ್ರಮುಖವಾಗಿ ಕಳೆದ ಬಾರಿ ನೀವು ಕರ್ನಾಟಕಕ್ಕೆ ಬಂದಾಗ ಜೆಡಿಎಸ್ ವಿರುದ್ಧ ಬಾಲಿಶ ಹೇಳಿಕೆ ಕೊಟ್ಟು ಹೋಗಿದ್ದಿರಿ. ಅದಕ್ಕೆ ನಾನು ಸೂಕ್ತ ಉತ್ತರ ಕೊಟ್ಟಿದ್ದೇನೆ. ನಾನು ಹೇಳಿದ್ದಕ್ಕೆ ನಿಮ್ಮ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇನೆ ಎಂದು ಅವರು ಹೇಳಿದ್ದಾರೆ.
ಆ ಮೂಲಕ ಜನರ ಸಂಶಯವನ್ನು ನಾನು ನಿವಾರಿಸಬೇಕಿದೆ. ನೀವು ಉತ್ತರ ಕೊಡದಿದ್ದರೆ ನನ್ನ ವಾದ ಒಪ್ಪಿದಂತೆ ಮತ್ತು ಹಿಟ್ ಅ್ಯಂಡ್ ರನ್ ಮಾಡಿದಂತೆ. ಆನಂತರ ನೀವು ಕೇವಲ ಟೆಂಪಲ್ ರನ್ ರಾಹುಲ್ ಆಗಿ ಉಳಿದಿರುವುದಿಲ್ಲ. ಬದಲಿಗೆ ಹಿಟ್ ಅ್ಯಂಡ್ ರನ್ ರಾಹುಲ್ ಆಗಲಿದ್ದೀರಿ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.