ಅನಿವಾಸಿ ಭಾರತೀಯನಿಗೆ ವಂಚನೆ: ಆರೋಪಿ ಬಂಧನ
ಬೆಂಗಳೂರು, ಮಾ.28: ಅನಿವಾಸಿ ಭಾರತೀಯರೊಬ್ಬರಿಗೆ ಹನ್ನೆರಡು ಕೋಟಿ ರೂ.ಗಳನ್ನು ವಂಚನೆ ಮಾಡಿದ ಆರೋಪದಡಿಯಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಗಣೇಶ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಅನಿವಾಸಿ ಭಾರತೀಯರಾದ ರಾಜೇಶ್ ರಾಮಚಂದ್ರನ್ ಎಂಬುವವರು ಹಣ ತೊಡಗಿಸಿ ವಂಚನೆಗೊಳಗಾಗಿದ್ದು, ಗಣೇಶ್ ಮತ್ತು ಅವರ ಪತ್ನಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ವಂಚನೆ ಮೊತ್ತ ಹೆಚ್ಚಿದ್ದರಿಂದ ಈ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿತ್ತು. ಈ ಕುರಿತು ತನಿಖೆ ನಡೆಸಿ ರಿಯಲ್ ಎಸ್ಟೇಟ್ ಏಜೆಂಟ್ ಗಣೇಶ್ ಎಂಬುವವರನ್ನು ಬಂಧಿಸಲಾಗಿದೆ.
ಅಲ್ಲದೆ, ಅವರ ಪತ್ನಿ ಶ್ರೀಲತಾ ರನ್ನು ವಿಚಾರಣೆಗೊಳಪಡಿಸಲಾಗುವುದು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಹಲವಾರು ವರ್ಷಗಳಿಂದ ದುಬೈನಲ್ಲಿ ನೆಲೆಸಿರುವ ರಾಜೇಶ್ ರಾಮಚಂದ್ರನ್ ಅವರಿಗೆ ಗಣೇಶ್ನ ಪರಿಚಯವಾಗಿತ್ತು. ತದನಂತರ ಈತ ರಾಜೇಶ್ ಅವರಿಗೆ ತಮ್ಮ ಕಂಪೆನಿಗೆ ಪಾಲುದಾರರಾಗಿ ಹಣ ಹೂಡಿದರೆ ಹೆಚ್ಚಿನ ಲಾಭ ಕೊಡಿಸುವುದಾಗಿ ಆಸೆ ತೋರಿಸಿದ್ದರು.
ಅದನ್ನು ನಂಬಿದ ರಾಜೇಶ್ ರಾಮಚಂದ್ರನ್ ಅವರು ಪಾಲುದಾರರಾಗಿ 6.63 ಕೋಟಿ ಹಣ ತೊಡಗಿಸಿದ್ದರು. ಈ ಹಣವನ್ನು ವಾಪಸ್ ನೀಡದೆ ಗಣೇಶ್ ಮತ್ತು ಈತನ ಪತ್ನಿ ಮೋಸ ಮಾಡಿದ್ದಾರೆಂದು ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ.