ಬೆಂಗಳೂರು: ಕಾರಿನಲ್ಲಿ ಯುವಕನ ಶವ ಪತ್ತೆ
ಬೆಂಗಳೂರು,ಮಾ.30: ನಗರದ ಯುವಕನೊಬ್ಬನ ಶವ ಕಾರಿನ ಸ್ಟೇರಿಂಗ್ ಮೇಲೆ ತಲೆಯಿಟ್ಟು ಕುಳಿತಿರುವ ಸ್ಥಿತಿಯಲ್ಲಿ ಚಿಕ್ಕಬಳ್ಳಾಪುರದ ಚಿಂತಾಮಣಿ ಬಳಿ ಪತ್ತೆಯಾಗಿದೆ ಎನ್ನಲಾಗಿದೆ.
ದೊರೆತಿರುವ ಶವ ನಗರದ ಕೆ.ಆರ್.ಪುರಂ ನಿವಾಸಿ ನಟರಾಜ್(28) ಎಂದು ಪೊಲೀಸರು ಗುರುತಿಸಿದ್ದಾರೆ. ಕೊಲೆ ಮಾಡಿ ಚಿಂತಾಮಣಿ ಸಮೀಪದ ಗಡಿಗವಾರಪಲ್ಲಿ ಗ್ರಾಮದ ಹೊರವಲಯದ ಪೊದೆ ಬಳಿ ನಿಲ್ಲಿಸಿದ್ದ ಇಂಡಿಕಾ ಕಾರಿನ ಚಾಲಕನ ಸೀಟಿನಲ್ಲಿ ಕೂರಿಸಿ ದುಷ್ಕರ್ಮಿಗಳು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ.
ಆಂಧ್ರದ ಧರ್ಮವಾರಪಲ್ಲಿಮೂಲದ ನಟರಾಜ್ ಕೆ.ಆರ್.ಪುರಂನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಘಟನೆ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಯುವಕನ ತಲೆ ಮತ್ತು ಕತ್ತಿನ ಭಾಗದಲ್ಲಿ ಗಂಭೀರವಾದ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂದ ಕೆಂಚಾರಹಳ್ಳಿ ಪೊಲೀಸರು ಮೊಕದ್ದಮೆ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.