ಅಡುಗೆ ಅನಿಲ ಸ್ಫೋಟ ಪ್ರಕರಣ: 3 ವರ್ಷದ ಬಾಲಕಿ ಮೃತ್ಯು
ಬೆಂಗಳೂರು, ಎ.6: ನಗರದ ಪೀಣ್ಯ ದಾಸರಹಳ್ಳಿ ಬಳಿ ಗುರುವಾರ ಸಂಭವಿಸಿದ ಅಡುಗೆ ಅನಿಲ (ಸಿಲಿಂಡರ್) ಸ್ಫೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದೇವಿಕಾ (3) ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾನೆ ಮೃತ ಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಒಂಭತ್ತು ಮಂದಿಗೆ ಗಂಭೀರ ಗಾಯಗಳಾಗಿದ್ದವು. ಗುರುವಾರ ಬಾಲಕಿ ದೇವಿಕಾರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅದೇ ರೀತಿ, ದೇವಿಕಾ ಸಹೋದರಿ ಅಲಮೇಲು(7) ಎಂಬಾಕೆಯ ಸ್ಥಿತಿಯೂ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಅಡುಗೆ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿರುವ ಲಕ್ಷ್ಮಮ್ಮ, ಮಹೇಶಮ್ಮ, ವೆಂಕಟೇಶಪ್ಪ, ಸೋಮಶೇಖರ್, ನಿರಂಜನ್, ಹೊನ್ನೂರಪ್ಪ ಎಂಬುವರು ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ಹಿನ್ನಲೆ: ಗುರುವಾರ ಇಲ್ಲಿನ ಪೀಣ್ಯದ ದಾಸರಹಳ್ಳಿ ಬಳಿಯ ಮನೆಯೊಂದರಲ್ಲಿ ಅಡುಗೆ ಸಿಲಿಂಡರ್ ಸ್ಫೋಟವಾಗಿ ನಾಲ್ವರು ಮಕ್ಕಳು ಸೇರಿ 9 ಮಂದಿಗೆ ಗಂಭೀರ ಗಾಯಗಳಾಗಿತ್ತು. ಈ ಕುಟುಂಬ ಪಾವಗಡ ಮೂಲದಾಗಿದ್ದು, ಮನೆ ಯಜಮಾನ ದೇವರಾಜು ಎಂಬುವರು ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.