ಎತ್ತಿನಹೊಳೆ ಯೋಜನೆ ಜಾರಿ ಪೊಳ್ಳು ಭರವಸೆ: ನಿವೃತ್ತ ನ್ಯಾ.ಗೋಪಾಲಗೌಡ
'ಅಪಾಯದಲ್ಲಿದೆ ಬಯಲು ಸೀಮೆ' ಜಾಗೃತಿ ಅಭಿಯಾನ
ಬೆಂಗಳೂರು, ಎ.7: ಕಾಲಮಿತಿಯಲ್ಲಿ ಎತ್ತಿನಹೊಳೆ ಯೋಜನೆ ಜಾರಿ ಮಾಡುವ ಮೂಲಕ ಬಯಲು ಸೀಮೆಗೆ ಶಾಶ್ವತ ನೀರಾವರಿ ಒದಗಿಸಲಾಗುವುದು ಎಂದು ಜನಪ್ರತಿನಿಧಿಗಳು ಸುಳ್ಳು ಭರವಸೆಗಳನ್ನು ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾ.ಗೋಪಾಲಗೌಡ ವಿಷಾದಿಸಿದ್ದಾರೆ.
ಶನಿವಾರ ಶಾಶ್ವತ ನೀರಾವರಿ ಹೋರಾಟ ಸಮಿತಿ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ಅಪಾಯದಲ್ಲಿದೆ ಬಯಲು ಸೀಮೆ’ ಕುರಿತ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯ ನೆಪದಲ್ಲಿ ಬೃಹತ್ ಪ್ರಮಾಣದ ಪೈಪ್ಗಳನ್ನು ಖರೀದಿಸಿದ್ದನ್ನು ಹೊರತು ಪಡಿಸಿ ಬೇರೆ ಯಾವುದೇ ಕೆಲಸಗಳು ನಡೆಯುತ್ತಿಲ್ಲವೆಂದು ಆರೋಪಿಸಿದರು.
ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ತಲಸ್ಪರ್ಶಿ ಅಧ್ಯಯನ ಆಗಿಲ್ಲ. ಜನತೆಗೆ ಕಣ್ಣೊರೆಸುವುದಕ್ಕಾಗಿ ಪೈಪುಗಳನ್ನು ಖರೀದಿಸಲಾಗಿದೆ. ಆದರೆ, ಆ ಪೈಪ್ಲೈನ್ಗಳನ್ನು ಅಳವಡಿಸುವುದಕ್ಕೆ ಅಗತ್ಯವಾದ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡಿಲ್ಲ. ಹೀಗೆ ಪ್ರಾಥಮಿಕವಾಗಿ ಮಾಡಬೇಕಾದ ಅಗತ್ಯ ಕೆಲಸಗಳೆ ನಡೆಯುತ್ತಿಲ್ಲ. ಆದರೂ ನಮ್ಮ ಜನಪ್ರತಿನಿಧಿಗಳು ಎತ್ತಿನಹೊಳೆ ಯೋಜನೆಯ ನೀರನ್ನು ನಾಳೆಯೆ ಬಯಲು ಸೀಮೆಗೆ ಹರಿಸುತ್ತೇವೆಂಬ ದಾಟಿಯಲ್ಲಿ ಮಾತನಾಡುತ್ತಾರೆ ಎಂದು ಅವರು ಕಿಡಿಕಾರಿದರು.
ಕೋಲಾರದ ಜನತೆ ಫ್ಲೋರೈಡ್ ಮಿಶ್ರಿತ ನೀರನ್ನು ಕುಡಿದು ವಿಕಲಾಂಗರಾಗುತ್ತಿದ್ದಾರೆ. ಇದರ ಜತೆಗೆ ರಾಜ್ಯ ಸರಕಾರ ಬೆಂಗಳೂರಿನ ಒಳಚರಂಡಿ ನೀರನ್ನು ಸಂಸ್ಕೃರಿಸಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸುವ ಕೆ.ಸಿ.ವ್ಯಾಲಿ ಯೋಜನೆಯನ್ನು ಹಮ್ಮಿಕೊಂಡಿದೆ. ಆದರೆ, ಚರಂಡಿ ನೀರು ಎಷ್ಟು ಪ್ರಮಾಣದಲ್ಲಿ ಶುದ್ಧೀಕರಣವಾಗಲಿದೆ ಎಂಬುದನ್ನು ಸೂಚಿಸುವ ಯಾವುದೆ ವೈಜ್ಞಾನಿಕ ಮಾನದಂಡಗಳಿಲ್ಲ. ಹೀಗಾಗಿ ಬೆಂಗಳೂರಿನ ಚರಂಡಿ ನೀರು ಕೋಲಾರ ಭಾಗದ ಜನತೆಯ ಆರೋಗ್ಯದ ಮೇಲೆ ಮತ್ತಷ್ಟು ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯ ರೆಡ್ಡಿ ಮಾತನಾಡಿ, ಕಳೆದ 20ವರ್ಷಗಳಿಂದ ಬಯಲು ಸೀಮೆಗೆ ನೀರಾವರಿ ಯೋಜನೆ ಜಾರಿ ಮಾಡಬೇಕೆಂದು ಸರಕಾರಗಳೊಂದಿಗೆ ಮನವಿ ಮಾಡುತ್ತಾ ಬಂದಿದ್ದೇವೆ. ಆದರೆ, ಜನಪ್ರತಿನಿಧಿಗಳು ಈ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿಲ್ಲ. ಕೇವಲ ಜನತೆಗೆ ಆಶ್ವಾಸನೆ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.
ಎತ್ತಿನಹೊಳೆ ಯೋಜನೆಯಿಂದ ಬಯಲು ಸೀಮೆಗೆ 24ಟಿಎಂಸಿ ನೀರು ಹರಿದು ಬರಲಿದೆ ಎಂದು ಸರಕಾರ ಸುಳ್ಳು ಅಶ್ವಾಸನೆ ನೀಡಿ ಸಾವಿರಾರು ಕೋಟಿ ರೂ. ಖರ್ಚು ಮಾಡುತ್ತಿದೆ. ಆದರೆ, ಭೂಗರ್ಭ ವಿಜ್ಞಾನಿಗಳು, ಇಸ್ರೋ ವಿಜ್ಞಾನಿಗಳು ಹಾಗೂ ನೀರಾವರಿ ತಜ್ಞರ ಪ್ರಕಾರ ಎತ್ತಿನಹೊಳೆಯಿಂದ ಬಯಲುಸೀಮೆಗೆ 3ಟಿಎಂಸಿಗಿಂತ ಹೆಚ್ಚು ಸಿಗುವುದಿಲ್ಲವೆಂದು ಖಚಿತ ಪಡಿಸಿದ್ದಾರೆ. ಆದರೂ ಸರಕಾರ ಸುಳ್ಳು ಭರವಸೆಗಳನ್ನು ನೀಡುವುದು ಬಿಟ್ಟಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಸರಕಾರ ಉತ್ತರ ಕರ್ನಾಟಕ, ಹೈ-ಕರ್ನಾಟಕ ಭಾಗಕ್ಕೆ ನೀರಾವರಿಗೆ ಪ್ರತಿವರ್ಷ ಸಾವಿರಾರು ಕೋಟಿ ರೂ. ಖರ್ಚು ಮಾಡುತ್ತಿದೆ. ಅದರ ಕಾಲು ಭಾಗದಷ್ಟು ಹಣವನ್ನು ಕೋಲಾರ ಭಾಗದ ಬಯಲು ಸೀಮೆಗೆ ನೀಡುತ್ತಿಲ್ಲ. ಇಂತಹ ತಾರತಮ್ಯ ನೀತಿಗಳನ್ನು ಬದಿಗೊತ್ತಿ ಬಯಲುಸೀಮೆಗೆ ನೀರಾವರಿ ಯೋಜನೆಯನ್ನು ಜಾರಿ ಮಾಡುವ ನಿಟ್ಟಿನಲ್ಲಿ ಪಾರದರ್ಶಕ ಹಾಗೂ ವೈಜ್ಞಾನಿಕವಾದಂತಹ ವರದಿಗಳು ಸಿದ್ಧಗೊಳ್ಳಲಿ ಎಂದು ಅವರು ಒತ್ತಾಯಿಸಿದರು.