ರಾಜರಾಜೇಶ್ವರಿ ಕ್ಷೇತ್ರದಿಂದ ಸ್ಪರ್ಧೆ: ಹುಚ್ಚ ವೆಂಕಟ್
ಬೆಂಗಳೂರು, ಎ.7: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಿಂದ ನಾನು ಕಣಕ್ಕಿಳಿಯುತ್ತಿದ್ದೇನೆ ಎಂದು ಚಿತ್ರ ನಟ ಹುಚ್ಚ ವೆಂಕಟ್ ತಿಳಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಜನರಿಗೆ ಯಾವುದೇ ಆಮಿಷವೊಡ್ಡದೆ, ಹಣ-ಹೆಂಡ ಹಂಚದೆ ಸ್ಪರ್ಧೆ ಮಾಡುತ್ತೇನೆ. ಜನರು ಮತ ಹಾಕಿ ಗೆಲ್ಲಿಸಿದರೆ ಜನರ ಸೇವೆ ಮಾಡಲು ಸದಾ ಸಿದ್ಧವಾಗಿರುತ್ತೇನೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಒಂದೇ ನಾಣ್ಯದ ಹಲವು ಮುಖಗಳಾಗಿದ್ದು, ನಾನು ಯಾವುದೇ ಪಕ್ಷದಿಂದ ಸ್ಪರ್ಧೆ ಮಾಡಲು ಬಯಸುವುದಿಲ್ಲ. ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇನೆ ಎಂದರು.
ಹಾಲಿ ಶಾಸಕ ಮುನಿರತ್ನ ಕ್ಷೇತ್ರದ ಜನರಿಗೆ ಕುಕ್ಕರ್, ನೀರಿನ ಬಾಟಲ್ ಹಾಗೂ ಸೀರೆಗಳನ್ನು ಹಂಚುವ ಮೂಲಕ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ. ಆದರೆ, ಈ ಚುನಾವಣೆಯಲ್ಲಿ ಮುನಿರತ್ನಗೆ ಯಾವುದೇ ಪಕ್ಷದಿಂದ ಸ್ಪರ್ಧೆ ಮಾಡಲು ಅವಕಾಶ ನೀಡುವುದಿಲ್ಲ ಎಂದ ಅವರು, ಒಂದು ವೇಳೆ ಶಾಸಕ ಮುನಿರತ್ನ ಅಂತಹವರು ಶಾಸಕರಾಗಿ ಆಯ್ಕೆಯಾದರೆ ಮುಂದಿನ ದಿನಗಳಲ್ಲಿ ತಮ್ಮ ಕ್ಷೇತ್ರವನ್ನು, ರಾಜ್ಯವನ್ನು ಮಾರಾಟ ಮಾಡುವುದರಲ್ಲಿ ಅನುಮಾನವಿಲ್ಲ. ಆದುದರಿಂದ ಇಂತಹ ನಾಯಕರನ್ನು ಜನ ತಿರಸ್ಕರಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಮುನಿರತ್ನ ಪಾಲಿಕೆ ಸದಸ್ಯರಾಗಿದ್ದ ಸಂದರ್ಭದಲ್ಲಿ ಸಾರ್ವಜನಿಕರ ಹಣವನ್ನು ಲೂಟಿ ಮಾಡಿದ್ದಾರೆ. ಈ ಸಂಬಂಧ ಸಿಬಿಐನಲ್ಲಿ ತನಿಖೆ ನಡೆಯುತ್ತಿದೆ. ಅದೇ ರೀತಿಯಲ್ಲಿ ಶಾಸಕರಾಗಿ ಆಯ್ಕೆಯಾದ ನಂತರದಿಂದ ಎಷ್ಟು ಹಣ ಲೂಟಿ ಮಾಡಲಾಗಿದೆ ಎಂಬುದರ ಕುರಿತು ತನಿಖೆ ನಡೆಯಬೇಕು ಎಂದ ವೆಂಕಟ್, ಮುಂದಿನ ಚುನಾವಣೆಯಲ್ಲಿ ಪ್ರಚಾರ ಮಾಡುತ್ತೇನೆ. ಆದರೆ, ಜನರಿಗೆ ಕೈ ಮುಗಿಯುವುದಿಲ್ಲ ಹಾಗೂ ಆಮಿಷವೊಡ್ಡುವುದಿಲ್ಲ. ಜನರು ಮತವನ್ನು ಮಾರಾಟ ಮಾಡಿಕೊಳ್ಳದಿದ್ದರೆ ಸಾಕು ಎಂದು ಹೇಳಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರ್ನಾಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮೈಸೂರಿನ ರಾಣಿ ಪ್ರಮೋದಾದೇವಿ ಅವರ ನಿವಾಸಕ್ಕೆ ಭೇಟಿ ನೀಡಿ, ಅವರೊಂದಿಗೆ ಮಾತುಕತೆ ನಡೆಸಿದ ತಕ್ಷಣ ಮೈಸೂರಿನ ಎಲ್ಲರೂ ಬಿಜೆಪಿಗೆ ಮತ ಹಾಕುವುದಿಲ್ಲ. ಇದೆಲ್ಲಾ ಚುನಾವಣೆಯ ಗಿಮಿಕ್. ಮೈಸೂರಿನಲ್ಲಿ ಆರೆಸ್ಸೆಸ್ನ ಕಾರ್ಯಕರ್ತನ ಹತ್ಯೆಯಾದ ಸಂದರ್ಭದಲ್ಲಿ ಯಾಕೆ ಅವರ ಮನೆಗೆ ಹೋಗಲಿಲ್ಲ. ಚುನಾವಣೆ ವೇಳೆಯಲ್ಲಿ ಯಾಕೆ ಹೋಗಿದ್ದಾರೆ. ಇದೆಲ್ಲಾ ದೊಡ್ಡ ನಾಟಕ.
-ಹುಚ್ಚ ವೆಂಕಟ್, ಚಿತ್ರನಟ