ಮಾಜಿ ಸಚಿವ ರೇವುನಾಯಕ್ ಬೆಳಮಗಿ ಜೆಡಿಎಸ್ ಸೇರ್ಪಡೆ
ಬೆಂಗಳೂರು, ಎ.22: ಕಲಬುರ್ಗಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ರೇವುನಾಯಕ್ ಬೆಳಮಗಿ ತಮ್ಮ ಬೆಂಬಲಿಗರೊಂದಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಮ್ಮುಖದಲ್ಲಿ ರವಿವಾರ ಜೆಡಿಎಸ್ ಸೇರ್ಪಡೆಯಾದರು.
ರೇವುನಾಯಕ್ ಬೆಳಮಗಿ ಜೆಡಿಎಸ್ ಸೇರ್ಪಡೆ ಆಗಿರುವುದರಿಂದ ಪಕ್ಷಕ್ಕೆ ಹೆಚ್ಚಿನ ಬಲ ಬಂದಿದೆ. ಅವರು ಕಲಬುರ್ಗಿ ಗ್ರಾಮಾಂತರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ದೇವೇಗೌಡ ಹೇಳಿದರು.
ಇದೆಲ್ಲಾ ದೇವರ ಆಟ, ನಮ್ಮದೇನಿಲ್ಲಾ ಎಂದು ರೇವುನಾಯಕ್ ಬೆಳಮಗಿಗೆ ದೇವೇಗೌಡ ಬಿ ಫಾರಂ ನೀಡಿದರು. ಈ ಕ್ಷೇತ್ರವನ್ನು ಒಪ್ಪಂದದಂತೆ ಬಿಎಸ್ಪಿಗೆ ಬಿಟ್ಟು ಕೊಡಲಾಗಿತ್ತು. ಆದರೆ, ಬೆಳಮಗಿ ಅವರಿಗಾಗಿ ಬಿಎಸ್ಪಿ ಕಲಬುರ್ಗಿ ಗ್ರಾಮಾಂತರ ಬಿಟ್ಟುಕೊಡಲು ಒಪ್ಪಿಕೊಂಡಿದ್ದಾರೆ. ಇದರಲ್ಲಿ ಯಾವುದೆ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಪಕ್ಷ ಸೇರ್ಪಡೆ ನಂತರ ಮಾತನಾಡಿದ ರೇವುನಾಯಕ್ ಬೆಳಮಗಿ, ಜೆಡಿಎಸ್ ಸೇರ್ಪಡೆ ಆಗಿರುವುದು ಬಹಳ ಸಂತೋಷ ಆಗಿದೆ. ಪಕ್ಷದ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ ಎಂದರು.
ಬಿಜೆಪಿಯಲ್ಲಿ ನನಗೆ ಟಿಕೆಟ್ ನೀಡುತ್ತೇನೆಂದು ಭರವಸೆ ನೀಡಿದ್ದರು. ಆದರೆ, ಟಿಕೆಟ್ ನೀಡದೆ ಮೋಸ ಮಾಡಿದ್ದಾರೆ. ನಾನು ಮಾಡಿದ ತಪ್ಪೇನು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ರೇವುನಾಯಕ್ ಬೆಳಮಗಿ ಪ್ರಶ್ನಿಸಿದರು.