ಹೆಬ್ಬಾಳ ಕ್ಷೇತ್ರ ಅಭಿವೃದ್ದಿಗೆ ಮಾದರಿ ಪ್ರಣಾಳಿಕೆ: ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ
ಬೆಂಗಳೂರು ಎ.22: ಹೆಬ್ಬಾಳ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ದಿಗೊಳಿಸಲು ಮಾದರಿ ಪ್ರಣಾಳಿಕೆಯನ್ನು ಕೆಲವೇ ದಿನಗಳಲ್ಲಿ ಬಿಡುಗಡೆಗೊಳಿಸುವುದಾಗಿ ಹೆಬ್ಬಾಳ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಹೇಳಿದರು.
ರವಿವಾರ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಅವರು, ಕಳೆದ ಎರಡು ವರ್ಷಗಳಲ್ಲಿ ತಮಗೆ ದೊರಕಿದ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದೇನೆ. ಆದರೆ, ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಆಡಳಿತದಿಂದಾಗಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಸಿಗಲಿಲ್ಲವೆಂದು ಆರೋಪಿಸಿದರು.
ನನಗೆ ಸಿಕ್ಕ ಎಲ್ಲ ಅನುದಾನವನ್ನು ಅಭಿವೃದ್ಧಿಗೆ ಬಳಸಿದ್ದು, ಒಂದೇ ಒಂದು ರೂಪಾಯಿ ಕಮಿಷನ್ ಪಡೆದಿಲ್ಲ. ಮುಂದಿನ ದಿನಗಳಲ್ಲಿ ಹೆಬ್ಬಾಳ ಕ್ಷೇತ್ರವನ್ನು ರಾಜ್ಯದಲ್ಲಿಯೆ ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ಪ್ರಣಾಳಿಕೆ ಸಿದ್ಧಪಡಿಸಲಾಗುವುದು ಎಂದು ಅವರು ಹೇಳಿದರು.
ಈ ವೇಳೆ ಇಸ್ರೋ ಮುಂಭಾಗದಲ್ಲಿರುವ ವಸತಿ ಗೃಹದಲ್ಲಿ ತಮ್ಮ ಪ್ರಚಾರ ಪ್ರಾರಂಭಿಸಿದ ಅವರು ನಂತರ ಆಂಡ್ರಿಯಾ ಅಪಾರ್ಟ್ಮೆಂಟ್ನಲ್ಲಿ ಆಯೋಜಿಸಿದ್ದ ಹಿರಿಯ ನಾಗರೀಕರೊಂದಿಗೆ ಸಮಾಲೋಚನೆ ನಡೆಸಿದರು.