ಬೆಂಗಳೂರು: ಅಭಿಮಾನಿಗಳಿಂದ ಡಾ.ರಾಜ್ಕುಮಾರ್ ಹುಟ್ಟುಹಬ್ಬ ಆಚರಣೆ
ಬೆಂಗಳೂರು, ಎ.24: ಕನ್ನಡ ಚಿತ್ರರಂಗ ಮೇರುನಟ ಡಾ.ರಾಜ್ಕುಮಾರ್ರವರ 89ನೆ ಹುಟ್ಟುಹಬ್ಬವನ್ನು ನಗರದ ಕಂಠೀರವ ಸ್ಟುಡಿಯೋದಲ್ಲಿ ಸಾವಿರಾರು ಅಭಿಮಾನಿಗಳು ಅವರ ಸಮಾಧಿಗೆ ಪೂಜೆ ಹಾಗೂ ಪುಷ್ಪ ನಮನ ಸಲ್ಲಿಸಿ ಆಚರಿಸಿದರು.
ಪುತ್ರರಾದ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಪುನಿತ್ರಾಜ್ಕುಮಾರ್ ಹಾಗೂ ಕುಟುಂಬ ಸದಸ್ಯರು ರಾಜ್ಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಿದರು. ಈ ವೇಳೆ ನೇತ್ರದಾನ, ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತ್ತು. ರಾತ್ರಿಯಿಂದಲೆ ರಾಜ್ಯದ ವಿವಿಧ ಮೂಲೆಗಳಿಂದ ಬಂದಿದ್ದ ಸಾವಿರಾರು ಅಭಿಮಾನಿಗಳು ಸರದಿ ಸಾಲಿನಲ್ಲಿ ನಿಂತು ಭಾವಪೂರ್ಣ ನಮನ ಸಲ್ಲಿಸಿದರು.
ರಾಜ್ ಹುಟ್ಟುಹಬ್ಬದ ಅಂಗವಾಗಿ ಶಿವರಾಜ್ಕುಮಾರ್ ಅಭಿನಯದ ರುಸ್ತುಂ ಸಿನೆಮಾದ ಫಸ್ಟ್ ಲುಕ್ ಬಿಡುಗಡೆ ಮಾಡಲಾಯಿತು. ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಪ್ರತಿವರ್ಷ ಆಯೋಜಿಸಲಾಗುತ್ತಿದ್ದ ಅನ್ನ ಸಂತರ್ಪಣೆ ಮಾಡಿರಲಿಲ್ಲ. ಆದರೂ ಬೆಂಗಳೂರು ನಾಗರಿಕರು ಕುಟುಂಬ ಸಮೇತವಾಗಿ ಬಂದು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುತ್ತಿದ್ದದ್ದು ವಿಶೇಷವಾಗಿತ್ತು.
ಈ ವೇಳೆ ಶಿವರಾಜ್ಕುಮಾರ್ ಮಾತನಾಡಿ, ಅಭಿಮಾನಿಗಳು ಡಾ.ರಾಜ್ಕುಮಾರ್ ಹಬ್ಬವನ್ನು ಪ್ರತಿವರ್ಷ ಅದ್ಧೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಡಾ.ರಾಜ್ಕುಮಾರ್ ಮಕ್ಕಳಾಗಿ ನಮಗೆ ಅದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿಲ್ಲ ಎಂದು ಅಭಿಮಾನಿಗಳ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.