ಬಿಎಸ್ವೈ ಸಿಎಂ ಆಗುವ ಬಗ್ಗೆ ನಿಮಗೂ ಸಂಶಯವೇ?
ಪತ್ರಕರ್ತರ ಪ್ರಶ್ನೆಯಿಂದ ಪೇಚಿಗೆ ಸಿಲುಕಿದ ಕೇಂದ್ರ ಸಚಿವ ಜಾವಡೇಕರ್
ಹಾವೇರಿ, ಮೇ 1: ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದು, ಮುಂದಿನ ಐದು ವರ್ಷ ಅವರೇ ಸಿಎಂ ಆಗಿರಲಿದ್ದಾರೆ ಎಂದು ಮೂರ್ನಾಲ್ಕು ಬಾರಿ ಪುನರುಚ್ಛರಿಸುವ ಮೂಲಕ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಪೇಚಿಗೆ ಸಿಲುಕಿದ ಘಟನೆ ನಡೆಯಿತು.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಈ ಬಗ್ಗೆ ವದಂತಿ ಹಬ್ಬಿಸುತ್ತಿರುವ ಕಾರಣಕ್ಕೆ ಪದೇ ಪದೇ ಹೇಳಬೇಕಿದೆ ಎಂದು ಸಮರ್ಥನೆ ನೀಡುವ ಮೂಲಕ ‘ಬಿಎಸ್ವೈ ಸಿಎಂ ಆಗುವ ಬಗ್ಗೆ ನಿಮಗೂ ಸಂಶಯವೇ? ಎಂಬ ಮಾಧ್ಯಮದರ ಪ್ರಶ್ನೆಗೆ ಉತ್ತರಿಸಿದರು.
ಯಡಿಯೂರಪ್ಪ ನಾಯಕತ್ವದಲ್ಲಿ ನಮಗೆ ಮತ್ತು ಜನತೆಗೆ ನಂಬಿಕೆ ಇದೆ. ಆದರೆ, ಕಾಂಗ್ರೆಸ್ ವದಂತಿ ಹಬ್ಬಿಸುತ್ತಿರುವ ಕಾರಣ ನಾವು ಪದೇ ಪದೇ ಹೇಳಬೇಕಾಗಿದೆ ಎಂದ ಅವರು, ಬಂಡಾಯ ಅಭ್ಯರ್ಥಿಗಳು ತಟಸ್ಥರಾಗಿ ಉಳಿದುಕೊಂಡು ಪಕ್ಷ ಬೆಂಬಲಿಸಿದರೆ, ಪರಿಶೀಲಿಸಲಾಗುವುದು. ಇಲ್ಲದಿದ್ದರೆ ಉಚ್ಛಾಟಿಸಲಾಗುವುದು ಎಂದು ಎಚ್ಚರಿಸಿದರು.
ಸಂಬಂಧವಿಲ್ಲ: ಬಿ.ಶ್ರೀರಾಮಲು ಅವರು ಜನಾರ್ದನ ರೆಡ್ಡಿ ಸಹೋದರರಲ್ಲ. ಜನಾರ್ದನ ರೆಡ್ಡಿ ಮತ್ತು ನಮ್ಮ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ. ವೈಯಕ್ತಿಕವಾಗಿ ಪ್ರಚಾರ ಮಾಡುವುದು ಅವರ ವೈಯಕ್ತಿಕ ಎಂದು ಜಾವಡೇಕರ್ ಇದೇ ವೇಳೆ ಸ್ಪಷ್ಟಣೆ ನೀಡಿದರು.