ಬೆಂಗಳೂರು : ಪತ್ನಿಯನ್ನು ಇರಿದು ಕೊಂದ ಪತಿ
ಬೆಂಗಳೂರು, ಮೇ 3: ಪತ್ನಿಯನ್ನು ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಕುತ್ತಿಗೆ ಬಿಗಿದು ಪತಿಯೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ಜೆಸಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.
ಜೆಸಿ ನಗರದ ಮಾರಪ್ಪಗಾರ್ಡನ್, 4ನೆ ಕ್ರಾಸ್ನಲ್ಲಿ ವಾಸವಾಗಿದ್ದ ಸಬೀನಾ ಬಾನು(26) ಕೊಲೆಯಾದ ಪತ್ನಿ ಎಂದು ಪೊಲೀಸರು ತಿಳಿಸಿದ್ದಾರೆ.
ಅಂಗನವಾಡಿ ಶಿಕ್ಷಕಿಯಾಗಿದ್ದ ಸಬೀನಾ ಬಾನು ಎಂಬುವವರು ಸೈಯದ್ ತಬ್ರೇಝ್ ಎಂಬಾತನನ್ನು ಪ್ರೀತಿಸಿದ್ದು, ಒಂದು ತಿಂಗಳ ಹಿಂದೆಯಷ್ಟೆ ಇವರು ಮದುವೆಯಾಗಿ ಮಾರಪ್ಪ ಗಾರ್ಡನ್ನಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಬುಧವಾರ ಸಂಜೆ ಕ್ಷುಲ್ಲಕ ವಿಚಾರವಾಗಿ ದಂಪತಿ ಮಧ್ಯೆ ಜಗಳವಾಗಿದೆ. ಜಗಳ ಕೋಪಕ್ಕೆ ತಿರುಗಿದಾಗ ಸೈಯದ್ ತಬ್ರೇಝ್ ಚಾಕುನಿಂದ ಸಬೀನಾ ಅವರ ಕುತ್ತಿಗೆ, ಹೊಟ್ಟೆ ಸೇರಿದಂತೆ ವಿವಿಧ ಕಡೆ ಮನಬಂದಂತೆ ಇರಿದು ನಂತರ ಟವೆಲ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮನೆ ಮಾಲಕರು ಬೆಳಗ್ಗೆ ಸಬೀನಾ ಭಾನು ಅವರ ತಂದೆಯವರಿಗೆ ಕರೆ ಮಾಡಿ ರಾತ್ರಿ ನಿಮ್ಮ ಮಗಳು-ಅಳಿಯನ ನಡುವೆ ಜಗಳ ನಡೆಯುತ್ತಿತ್ತು ಎಂದು ಹೇಳಿದ್ದಾರೆ. ಸಬೀನಾ ಬಾನು ತಂದೆ ತಕ್ಷಣ ಮನೆಗೆ ಬಂದು ನೋಡಿದಾಗ ಮಗಳು ಕೊಲೆಯಾಗಿ ರಕ್ತದ ಮುನಲ್ಲಿ ಬಿದ್ದಿರುವುದು ಕಂಡುಬಂದಿದೆ.
ಜೆಸಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಶವವನ್ನು ಬೌರಿಂಗ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಜೆಸಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.