ರಾಮರಾಜ್ಯ ನಿರ್ಮಿಸಲು ಬಿಜೆಪಿಗೆ ಅಧಿಕಾರ: ರಾಜನಾಥ್ಸಿಂಗ್
ಬೆಂಗಳೂರು, ಮೇ 6: ಬಿಜೆಪಿ ಅಧಿಕಾರದ ಆಸೆಗೆ ರಾಜಕೀಯ ಮಾಡುತ್ತಿಲ್ಲ. ರಾಮರಾಜ್ಯ ನಿರ್ಮಿಸಲು ನಾವೆಲ್ಲ ಶ್ರಮಿಸುತ್ತಿದ್ದೇವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದರು.
ರವಿವಾರ ನಗರದ ಪುರಭವನದಲ್ಲಿ ಜೈನ ಸಮುದಾಯದೊಂದಿಗೆ ನಡೆದ ಸಂವಾದವನ್ನುದ್ದೇಶಿಸಿ ಮಾತನಾಡಿದ ಅವರು, ರಾಮ ರಾಜಕೀಯದಲ್ಲಿ ನಿಷ್ಣಾತನಾಗಿದ್ದ. ಅದಕ್ಕಾಗಿಯೇ ರಾಮರಾಜ್ಯ ನಿರ್ಮಾಣ ಮಾಡಿ ರಾಜಕೀಯ ಮಾಡಿದ್ದ. ಅದೇ ರಾಜಕೀಯ ಗಾಂಧೀಜಿ, ಸುಭಾಷ್ ಚಂದ್ರ ಬೋಸ್ ಅವರ ಕೈಗೆ ಬಂದಾಗ ಸ್ವಾತಂತ್ರ್ಯಕ್ಕಾಗಿ ಬಳಕೆಯಾಯಿತು ಎಂದು ಹೇಳಿದರು.
ಬಿಜೆಪಿ ಸಹ ಅಧಿಕಾರದ ಆಸೆಗೆ ರಾಜಕೀಯ ಮಾಡುತ್ತಿಲ್ಲ. ರಾಮರಾಜ್ಯ ನಿರ್ಮಿಸಲು ನಾವೆಲ್ಲ ಶ್ರಮಿಸುತ್ತಿದ್ದೇವೆ. ಯುವಕರು ರಾಜಕೀಯಕ್ಕೆ ಬರಬೇಕು. ದೇಶದ ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡುವಂತಾಗಬೇಕು ಎಂದ ಅವರು, ಐದು ವರ್ಷಗಳಲ್ಲಿ ನವ ಭಾರತ ನಿರ್ಮಾಣ ಮಾಡುವ ಸಂಕಲ್ಪ ಹೊಂದಿದ್ದೇವೆ ಎಂದರು.
ಬಿಜೆಪಿ ಆಡಳಿತದಲ್ಲಿ ದೇಶದ ಜಿಡಿಪಿ ಶೇ 7.2ಕ್ಕೆ ವೃದ್ಧಿಯಾಗಿದೆ. ಕಾಂಗ್ರೆಸ್ ಯಾವತ್ತೂ ಈ ಪ್ರಮಾಣವನ್ನು ತಲುಪಿಲ್ಲ. ಬೆಂಗಳೂರನ್ನು ನಾನು ಗಾರ್ಬೇಜ್ ಸಿಟಿ ಎಂದು ಕರೆಯಲು ಇಷ್ಟಪಡುವುದಿಲ್ಲ. ಆದರೆ, ಪ್ರಧಾನಿ ಮೋದಿ ಪ್ರಾರಂಭಿಸಿದ ಸ್ವಚ್ಛ ಭಾರತ ಅಭಿಯಾನಕ್ಕೆ ರಾಜ್ಯದಲ್ಲಿ ಪ್ರೋತ್ಸಾಹ ನೀಡದ ಕಾಂಗ್ರೆಸ್ ಸರಕಾರದ ವಿರುದ್ಧ ಸಿಟ್ಟಿದೆ ಎಂದು ಅವರು ತಿಳಿಸಿದರು.