ಸುಪ್ರೀಂ ಕೋರ್ಟ್ ತೀರ್ಪಿನನ್ವಯ ಜೆಡಿಎಸ್-ಕಾಂಗ್ರೆಸ್ ಸರಕಾರಕ್ಕೆ ರಾಜ್ಯಪಾಲರು ಆಹ್ವಾನ ನೀಡಬೇಕಿದೆ: ರಾಮಲಿಂಗಾರೆಡ್ಡಿ
ಬೆಂಗಳೂರು, ಮೇ 16: ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನನ್ವಯ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡಬೇಕಿದೆ ಎಂದು ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಬುಧವಾರ ನಡೆದ ಶಾಸಕಾಂಗ ಸಭೆಯ ಬಳಿಕ ಹೊರ ಬಂದು ಮಾತನಾಡಿದ ಅವರು, ನಮ್ಮ ಶಾಸಕರು ನಮ್ಮ ಜೊತೆ ಇದ್ದಾರೆ. ನಾವೆಲ್ಲಾ ಒಟ್ಟಾಗಿಯೇ ಇದ್ದೇವೆ. ಎಚ್ಡಿಕೆ ಸಿಎಂ ಆಗಲು ನಾವೆಲ್ಲಾ ಸಹಿ ಮಾಡಿದ್ದೇವೆ ಎಂದು ಹೇಳಿದ್ದಾರೆ. ಸದ್ಯಕ್ಕೆ ಸಿಎಲ್ಪಿ ನಾಯಕನ ಆಯ್ಕೆ ಆಗಿಲ್ಲ. ಎಚ್ಡಿಕೆ ಸಿಎಂ ಆಗಲು ನಾವೆಲ್ಲಾ ಸಹಿ ಮಾಡಿ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಸಿಎಲ್ಪಿ ಸಭೆಗೆ ಎಲ್ಲರೂ ಬಂದಿದ್ದರು. ಮೂರ್ನಾಲ್ಕು ಜನ ಮಾತ್ರ ಬಂದಿರಲಿಲ್ಲ. ಎಲ್ಲರೂ ಬರುತ್ತಿದ್ದಾರೆ. ಬೆಳಗಾವಿ ಭಾಗದ ಶಾಸಕರಿಗೆ ಅನಾರೋಗ್ಯವಿದೆ. ಬಿಜೆಪಿಯವರು ಪ್ರಯತ್ನ ಮಾಡ್ತಿರೋದು ನಿಜ. ರಾಜ್ಯಪಾಲರ ತೀರ್ಮಾನದ ಮೇಲೆ ಮುಂದಿನ ಕ್ರಮ. ನಮಗೆ ಮೆಜಾರಿಟಿ ಇದ್ದರೂ ರಾಜ್ಯಪಾಲರು ನಮಗೆ ಅವಕಾಶ ನೀಡಲಿಲ್ಲ ಅಂದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ರಾಜಭವನಕ್ಕೆ ಪೆರೇಡ್ ಮಾಡಲು ಸಿದ್ಧ ಎಂದು ತಿಳಿಸಿದರು.
ಸಭೆಯಲ್ಲಿ ಸಿಎಂ ಕಣ್ಣೀರು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದೆಲ್ಲಾ ಸುಳ್ಳು, ಒಳ್ಳೆ ಆಡಳಿತ ನೀಡಿದ್ದು ನಿಜ. ನಮ್ಮ ಸೋಲಿಗೆ ಸಿಎಂ ಕಾರಣ ಎನ್ನುವ ಕೋಳಿವಾಡ ಆರೋಪ ಸುಳ್ಳು. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿತ್ತು. ಆಗ ಬರೀ ರೆಸಾರ್ಟ್ ರಾಜಕೀಯ ಮಾಡಿದರು. ಚುನಾವಣೆ ವೇಳೆ ನೀಡಿದ್ದ ಭರವಸೆ ಈಡೇರಿಸಲಿಲ್ಲ. ಜೈಲಿಗೆ ಹೋಗಿಬಂದರು. ಅತಿ ದೊಡ್ಡ ಪಕ್ಷಕ್ಕೆ ಅಧಿಕಾರ ನಡೆಸಲು ಅವಕಾಶ ನೀಡಬೇಕು ಅಂತ ಏನಿಲ್ಲ. ಹೀಗಿದ್ದರೆ ಗೋವಾ ಸೇರಿದಂತೆ ಇತರೆ ರಾಜ್ಯಗಳ ಕತೆ ಏನು? ಬಿಜೆಪಿಗೆ ಅಧಿಕಾರಕ್ಕೆ ಅವಕಾಶ ನೀಡಿದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಬಿಜೆಪಿ 2008ರಲ್ಲಿ ಆಪರೇಷನ್ ಕಮಲ ಮಾಡಿದ್ದರು. ಇದೇನು ಅವರಿಗೆ ಹೊಸದೇನಲ್ಲ. ಅಡ್ಡದಾರಿಯಲ್ಲಿ ಅಧಿಕಾರ ಹಿಡಿದಿದ್ದರು. ಅಧಿಕಾರಕ್ಕಾಗಿ ಹೇಸಿಗೆ ಕೆಲಸ ಮಾಡಲು ಅವರು ಸಿದ್ಧ. ಅವರಿಗೆ ಅಧಿಕಾರ ಬೇಕು. ಬಿಜೆಪಿಯವರು ನಮ್ಮ ಶಾಸಕರನ್ನು ಸಂಪರ್ಕ ಮಾಡಿದ್ದು ನಿಜ ಎಂದು ಸಿಎಲ್ಪಿ ಸಭೆಯಲ್ಲಿ ಐವರು ಶಾಸಕರು ಕೈ ಎತ್ತಿದ್ದರು. ಆದರೆ ಅವರ ಆಮಿಷಕ್ಕೆ ನಮ್ಮ ಶಾಸಕರು ಬಗ್ಗಿಲ್ಲ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.