ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಸಿದ್ದರಾಮಯ್ಯ ಆಯ್ಕೆ?
ಬೆಂಗಳೂರು, ಮೇ 18: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯ್ಕೆಯಾಗಿದ್ದು, ಇವರ ಪರವಾಗಿ ಎಲ್ಲ ಕಾಂಗ್ರೆಸ್ ಶಾಸಕರು ಒಮ್ಮತದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಹೈದರಾಬಾದ್ನ ತಾಜ್ ಕೃಷ್ಣಾ ಹೊಟೇಲ್ನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಕಾನೂನು ಪದವಿ ಪಡೆದಿರುವ, ಅಪಾರ ಅನುಭವವಿರುವ, ಸಾಂವಿಧಾನಿಕ ರೀತಿ-ನೀತಿಗಳ ಬಗ್ಗೆ ತಿಳಿದಿರುವ, ತರ್ಕಬದ್ಧವಾಗಿ ವಾದ ಮಂಡಿಸುವ ಸಿದ್ದರಾಮಯ್ಯನವರೇ ಶಾಸಕಾಂಗ ಪಕ್ಷದ ನಾಯಕರಾಗಲಿ ಎಂಬುದು ಸಭೆಯಲ್ಲಿದ್ದ ಶಾಸಕರ ಒಕ್ಕೊರಲಿನ ಬೇಡಿಕೆಯಾಗಿದ್ದರಿಂದ, ಅವರನ್ನೇ ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಶನಿವಾರ ವಿಶೇಷ ಅಧಿವೇಶನ ಆರಂಭವಾಗಲಿದ್ದು, ನಾಲ್ಕು ಗಂಟೆ ವೇಳೆಗೆ ಎಲ್ಲ ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹೀಗಾಗಿ, ಎಲ್ಲ ಕಾಂಗ್ರೆಸ್ ಶಾಸಕರು ಹೈದ್ರಾಬಾದ್ನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ಬಿಜೆಪಿ ಶಾಸಕಾಂಗ ಪಕ್ಷದ ಸಭೆ: ಅತ್ತ ಕಾಂಗ್ರೆಸ್ನವರು ಹೈದ್ರಾಬಾದ್ನಲ್ಲಿ ಶಾಸಕಾಂಗ ಸಭೆ ನಡೆಸಿದರೆ, ಇತ್ತ ಬಿಜೆಪಿ ಮುಖಂಡರುಗಳು ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಬಿಜೆಪಿ ಶಾಸಕರ ಸಭೆಯನ್ನು ನಡೆಸಿ ಯಾರೂ ಕೂಡ ಮನೆಗೆ ಹೋಗಬೇಡಿ. ಹೊಟೇಲ್ನಲ್ಲಿಯೆ ಉಳಿದುಕೊಳ್ಳಬೇಕೆಂದು ಪಕ್ಷದ ನಾಯಕರು ಶಾಸಕರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.