ಜಯನಗರ ಕ್ಷೇತ್ರ: ವಿಜಯಕುಮಾರ್ ಸಹೋದರ ಬಿ.ಎನ್.ಪ್ರಹ್ಲಾದ್ಗೆ ಬಿಜೆಪಿ ಟಿಕೆಟ್
ರಾಜ್ಯ ವಿಧಾನಸಭಾ ಚುನಾವಣೆ
ಬೆಂಗಳೂರು, ಮೇ 22: ಬಿಜೆಪಿ ಅಭ್ಯರ್ಥಿ ವಿಜಯ ಕುಮಾರ್ ನಿಧನದಿಂದ ಮುಂದೂಡಲಾಗಿದ್ದ ಜಯನಗರ ಕ್ಷೇತ್ರದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದು, ವಿಜಯ ಕುಮಾರ್ ಸಹೋದರ ಬಿ.ಎನ್ ಪ್ರಹ್ಲಾದ್ ಅವರಿಗೆ ಟಿಕೆಟ್ ಪ್ರಕಟಿಸಲಾಗಿದೆ.
ಮಂಗಳವಾರ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಬಿ.ಎನ್ ಪ್ರಹ್ಲಾದ್ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಜೂನ್11ರಂದು ಮತದಾನ ನಡೆಯಲಿದೆ. ಜೂನ್ 13ಕ್ಕೆ ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ತಿಳಿಸಲಾಗಿದೆ.
2008ರಿಂದ ಎರಡು ಅವಧಿಗೆ ಜಯನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ವಿಜಯ ಕುಮಾರ್ ಮೇ 4ರಂದು ಚುನಾವಣಾ ಪ್ರಚಾರದ ವೇಳೆ ಅಸ್ವಸ್ಥಗೊಂಡು ಹೃದಯಾಘಾತದಿಂದ ನಿಧನರಾದ್ದರಿಂದ ಮೇ 12ಕ್ಕೆ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಲಾಗಿತ್ತು.
ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ, ಜೆಡಿಎಸ್ನಿಂದ ಕಾಳೇಗೌಡ ಹಾಗೂ ಪಕ್ಷೇತರರಾಗಿ ಲಂಚ ಮುಕ್ತ ಕರ್ನಾಟಕ ವೇದಿಕೆ ಮುಖ್ಯಸ್ಥ ರವಿಕೃಷ್ಣಾ ರೆಡ್ಡಿ ಚುನಾವಣಾ ಕಣದಲ್ಲಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ