ಬ್ಯಾಂಕ್ ನೌಕರರ ಮುಷ್ಕರ ಬಹುತೇಕ ಯಶಸ್ವಿ
ವೇತನ ಪರಿಷ್ಕರಣೆ ಮಾಡಲು ಆಗ್ರಹ
-ಸಾರ್ವಜನಿಕರ ಪರದಾಟ
-ನಾಳೆ ಎಟಿಎಂಗಳಲ್ಲಿ ಹಣದ ಕೊರತೆ ಸಾಧ್ಯತೆ
-2, 500 ನೌಕರರಿಂದ ಬೃಹತ್ ಪ್ರತಿಭಟನಾ ಪ್ರದರ್ಶನ
-ಗುರುವಾರವೂ ಮುಂದುವರಿಯಲಿರುವ ಮುಷ್ಕರ
ಬೆಂಗಳೂರು, ಮೇ 30: ವೇತನ ಪರಿಷ್ಕರಣೆ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಕರೆ ನೀಡಿದ್ದ ಎರಡು ದಿನಗಳ ಅಖಿಲ ಭಾರತ ಬ್ಯಾಂಕ್ ಮುಷ್ಕರ ಮೊದಲ ದಿನವಾದ ಬುಧವಾರ ಬಹುತೇಕ ಯಶಸ್ವಿಯಾಗಿದ್ದು, ಕೆಲವೆಡೆ ಗ್ರಾಹಕರು ಪರದಾಡುವಂತಾಯಿತು.
ಬೆಂಗಳೂರಿನಲ್ಲಿ ಎಸ್ಬಿಐ ಬ್ಯಾಂಕ್, ಕೆನರಾ, ಸಿಂಡಿಕೇಟ್, ವಿಜಯಾ, ಕಾರ್ಪೋರೇಷನ್, ದೇನಾ ಬ್ಯಾಂಕ್, ಆಂಧ್ರ, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಹೀಗೆ 30 ರಾಷ್ಟ್ರೀಕೃತ ಬ್ಯಾಂಕ್ಗಳ ಸುಮಾರು 2 ಸಾವಿರ ಶಾಖೆಗಳು ಬುಧವಾರ ಸೇವೆಯನ್ನು ಸ್ಥಗಿತಗೊಳಿಸಿದ್ದವು. ಹೀಗಾಗಿ ಗ್ರಾಹಕರು ಬ್ಯಾಂಕ್ ಸೇವೆಗಳಿಗಾಗಿ ಪರದಾಡುವಂತಾಯಿತು. ‘ಗ್ರಾಹಕರ ಗಮನಕ್ಕೆ’ ಎಂದು ಈ ಮೊದಲೇ ಬ್ಯಾಂಕ್ಗಳಲ್ಲಿ ಸೂಚನಾ ಲಕಗಳನ್ನು ಅಳವಡಿಸಿದ್ದುದರಿಂದ ಹಾಗೂ ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳಲ್ಲಿ ಬ್ಯಾಂಕ್ ಮುಷ್ಕರದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿತ್ತು. ಆದಾಗ್ಯೂ ಮಾಹಿತಿ ಗೊತ್ತಿಲ್ಲದ ಕೆಲವು ಗ್ರಾಹಕರು ಬ್ಯಾಂಕ್ಗಳಿಗೆ ಹೋಗಿ ವಾಪಸಾದ ಸಂಗತಿಯೂ ಕಂಡು ಬಂತು.
ಗ್ರಾಹಕರಿಗೆ ತೊಂದರೆಯಾಗದಿರಲಿ ಎಂಬ ಉದ್ದೇಶದಿಂದ ಮಂಗಳವಾರ ಸಂಜೆ ಬಹುತೇಕ ಎಟಿಎಂಗಳಿಗೆ ಸಾಕಷ್ಟು ಹಣ ತುಂಬಲಾಗಿತ್ತು. ಹೀಗಾಗಿ ಗ್ರಾಹಕರಿಗೆ ಹಣ ಪಡೆಯಲು ಹೆಚ್ಚು ತೊಂದರೆಯಾಗಲಿಲ್ಲ. ಆದರೆ ಎರಡು ದಿನಗಳ ಮುಷ್ಕರವಾಗಿರುವುದರಿಂದ ಗುರುವಾರ ಎಟಿಎಂಗಳೂ ಖಾಲಿಯಾಗಲಿದ್ದು, ಸಮಸ್ಯೆ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.
ಬೃಹತ್ ಪ್ರತಿಭಟನೆ: ಯೂನಿಯನ್ನಡಿ 9 ಸಂಘಟನೆಗಳು ಬರಲಿದ್ದು, ಈ ಎಲ್ಲಾ ಸಂಘಟನೆಗಳ ಮುಖಂಡರು ಮತ್ತು ನಾನಾ ಬ್ಯಾಂಕ್ಗಳ ನೌಕರರು ಸೇರಿದಂತೆ ಸುಮಾರು 2,500 ಮಂದಿ ಬುಧವಾರ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಭಾರತೀಯ ಬ್ಯಾಂಕುಗಳ ಸಂಸ್ಥೆ, ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ಇಂಡಿಯನ್ ನ್ಯಾಷನಲ್ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್(ಐಎನ್ಬಿಇಎಫ್)ನ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಕೆ. ನರಸಿಂಹಮೂರ್ತಿ, ಭಾರತೀಯ ಬ್ಯಾಂಕುಗಳ ಸಂಸ್ಥೆಯು ಐದು ವರ್ಷಗಳ ಹಿಂದೆ 10ನೇ ವೇತನ ಆಯೋಗದ ವೇಳೆ ಶೇ.15ರಷ್ಟು ವೇತನ ಹೆಚ್ಚಳ ಮಾಡಿತ್ತು. ಆದರೆ ಇದೀಗ ಕೇವಲ ಶೇ.2ರಷ್ಟು ಮಾತ್ರ ಹೆಚ್ಚಿಸಿದೆ. ನೋಟು ಅಮಾನ್ಯೀಕರಣದ ವೇಳೆ 51 ದಿನಗಳ ಕಾಲ ಶನಿವಾರ, ರವಿವಾರ ಎನ್ನದೆ, ಬೆಳಗ್ಗೆಯಿಂದ ರಾತ್ರಿಯವರೆಗೂ ದುಡಿದಿದ್ದೇವೆ. ಹೀಗಿರುವಾಗ ಕೇವಲ ಶೇ.2ರಷ್ಟು ವೇತನ ಹೆಚ್ಚಿಸುವುದು ನ್ಯಾಯವಲ್ಲ. ಇದನ್ನು ನಾವು ಒಪ್ಪುವುದೂ ಇಲ್ಲ. ನಮ್ಮ ಕೆಲಸಕ್ಕೆ ತಕ್ಕಂತೆ ಗೌರವಯುತ ವೇತನ ನೀಡಬೇಕು ಎಂದು ಆಗ್ರಹಿಸಿದರು. ಗುರುವಾರವೂ ಬೆಳಗ್ಗೆ 10.30 ರಿಂದ ಮಧ್ಯಾಹ್ನದವರೆಗೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬ್ಯಾಂಕ್ ನೌಕರರ ಪ್ರತಿಭಟನೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಆದರೆ, ಹಲವು ಬ್ಯಾಂಕ್ಗಳಲ್ಲಿ ಹಿರಿಯ ಅಧಿಕಾರಿಗಳು ಮುಷ್ಕರದಲ್ಲಿ ಭಾಗಿಯಾಗದ ಕಾರಣ ಈ ಸಿಬ್ಬಂದಿ ಬ್ಯಾಂಕ್ಗಳಿಗೆ ತೆರಳಿದ್ದರು. ಅರೆ-ಬರೆ ಬಾಗಿಲು ತೆಗೆದು ತಮ್ಮ ಕೆಲಸಗಳನ್ನು ಮಾತ್ರ ಮಾಡಿಕೊಳ್ಳುತ್ತಿದ್ದರು. ಆದರೆ ಗ್ರಾಹಕರ ವಹಿವಾಟುಗಳೇನೂ ನಡೆಯಲಿಲ್ಲ.
ಸೇವೆ ನೀಡಿದ ಅಂತಾರಾಷ್ಟ್ರೀಯ ಬ್ಯಾಂಕ್ಗಳು: ಅಂತಾರಾಷ್ಟ್ರೀಯ ಮನ್ನಣೆ ಪಡೆದ ಆ್ಯಕ್ಸಿಸ್ ಬ್ಯಾಂಕ್, ಸಿಟಿ, ಕೊಟಕ್, ಐಸಿಐಸಿಐ, ಎಚ್ಡಿಎಫ್ಸಿ ಸೇರಿದಂತೆ ಕೆಲವು ಬ್ಯಾಂಕ್ಗಳು ಸೇವೆಯನ್ನು ಮುಂದುವರಿಸಿದ್ದವು. ಜತೆಗೆ ಎಲ್ಲಾ ರಾಷ್ಟ್ರೀಕೃತ, ಅಂತಾರಾಷ್ಟ್ರೀಯ ಬ್ಯಾಂಕ್ಗಳಲ್ಲಿ ನೆಟ್ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಸೇವೆ ಲಭ್ಯವಿತ್ತು. ಇದು ಗ್ರಾಹಕರಿಗೆ ಸ್ವಲ್ಪ ಸಮಾಧಾನ ತಂದಿತ್ತು.
ಬೇಡಿಕೆಗಳು: ಕಳೆದ ಮೂರು ವರ್ಷಗಳಿಂದ ಕೇಂದ್ರ ಸರಕಾರದ ಯೋಜನೆಗಳಾದ ಜನ್ಧನ್, ಅಟಲ್ ಪಿಂಚಣಿ ಯೋಜನೆ, ಮುದ್ರಾ ಹಾಗೂ ನೋಟು ಅಮಾನೀಕರಣ ಸೇರಿದಂತೆ ಹಲವು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದ್ದೇವೆ. ಯೋಜನೆಗಳನ್ನು ಅನುಷ್ಠಾನ ಮಾಡುವಾಗ ಗರಿಷ್ಠ ಪ್ರಮಾಣದಲ್ಲಿ ಕೆಲಸ ಮಾಡಿದ್ದೇವೆ. ಸರಕಾರ ವೇತನ ಪರಿಷ್ಕರಣೆ ಮಾಡುವುದಾಗಿ ಭರವಸೆ ನೀಡಿತ್ತು. ಕೇವಲ ಶೇ.2ರಷ್ಟು ಮಾತ್ರ ಹೆಚ್ಚಳ ಮಾಡುವುದಾಗಿ ಹೇಳಿರುವುದರಿಂದ ಬ್ಯಾಂಕ್ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ.