ನಟ ದುನಿಯಾ ವಿಜಯ್ ವಿರುದ್ಧ ಎಫ್ಐಆರ್
ಬೆಂಗಳೂರು, ಮೇ 31: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಚಿತ್ರನಟ ದುನಿಯಾ ವಿಜಯ್ ವಿರುದ್ಧ ಇಲ್ಲಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.
ಮಾಸ್ತಿಗುಡಿ ಚಿತ್ರೀಕರಣ ಸಂದರ್ಭದಲ್ಲಿ ಇಬ್ಬರು ಸಹ ನಟರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ ಪ್ರಕರಣ ಸಂಬಂಧ ನಿರ್ದೇಶಕನ ಮೇಲೆ ರಾಮನಗರ ಜೆಎಂಎಫ್ಸಿ ನ್ಯಾಯಾಲಯದಿಂದ ಬಂಧನದ ವಾರೆಂಟ್ ಜಾರಿಯಾಗಿತ್ತು.
ನ್ಯಾಯಾಲಯದ ಆದೇಶದಂತೆ ತಾವರೆಕೆರೆ ಠಾಣಾ ಪೊಲೀಸರು ವಾರೆಂಟ್ ಹಿಡಿದು ನಿರ್ದೇಶಕ ಸುಂದರ್ ಪಿ.ಗೌಡ ಅವರನ್ನು ಬಂಧಿಸಲು ಬುಧವಾರ ತಡರಾತ್ರಿ ಹೋಗಿದ್ದರು. ಸುಂದರ್ ಮನೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದ ಕಾರಣ, ದುನಿಯಾ ವಿಜಯ್ ಸ್ಥಳಕ್ಕೆ ಧಾವಿಸಿ ಸುಂದರ್ ಬಂಧಿಸದಂತೆ ಪೊಲೀಸರನ್ನು ತಡೆದಿದ್ದರು. ಇದೇ ವೇಳೆ ಸುಂದರ್ ಮನೆಯ ಹಿಂಬಾಗಿಲಿನಿಂದ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.
ಬಳಿಕ ತಾವರೆಕೆರೆ ಮುಖ್ಯಪೇದೆ ಗೋವಿಂದರಾಜು ಅವರು ಈ ಸಂಬಂಧ ದೂರು ನೀಡಿದ್ದ ಹಿನ್ನೆಲೆಯಲ್ಲಿ ಸಿಕೆ ಅಚ್ಚುಕಟ್ಟು ಠಾಣೆಯಲ್ಲಿ ನಟ ದುನಿಯಾ ವಿಜಯ್ ವಿರುದ್ಧ ಐಪಿಸಿ 353 ಅನ್ವಯ ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.