ವಿಧಾನಪರಿಷತ್ತಿನ 11 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧ
ಬೆಂಗಳೂರು, ಜೂ. 1: ವಿಧಾನಸಭೆಯಿಂದ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ನಡೆಯಬೇಕಿದ್ದ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಸಲ್ಲಿಸಿರುವ 11 ಅಧಿಕೃತ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿ ಎ.ಎಸ್.ಕುಮಾರಸ್ವಾಮಿ ತಿಳಿಸಿದ್ದಾರೆ.
ಶುಕ್ರವಾರ ನಾಮಪತ್ರ ಪರಿಶೀಲನೆ ನಡೆಸಿದ್ದು, ಕಾಂಗ್ರೆಸ್ನಿಂದ ಕೆ.ಹರೀಶ್ ಕುಮಾರ್, ಅರವಿಂದ ಕುಮಾರ್ ಅರಳಿ, ಕೆ.ಗೋವಿಂದರಾಜ್ ಮತ್ತು ಸಿ.ಎಂ. ಇಬ್ರಾಹೀಂ, ಜೆಡಿಎಸ್ನಿಂದ ಬಿ.ಎಂ.ಫಾರೂಕ್ ಮತ್ತು ಎಸ್.ಎಲ್.ಧರ್ಮೇಗೌಡ, ಬಿಜೆಪಿಯಿಂದ ಎಸ್.ರುದ್ರೇಗೌಡ, ಕೆ.ಪಿ.ನಂಜುಂಡಿ, ಎನ್.ರವಿಕುಮಾರ್, ತೇಜಸ್ವಿನಿಗೌಡ ಮತ್ತು ರಘುನಾಥ ಮಲ್ಕಾಪುರೆ ಅವರು ನಾಮಪತ್ರ ಸಿಂಧುವಾಗಿವೆ.
ಹತ್ತು ಮಂದಿ ಶಾಸಕರು ಸೂಚಕರಾಗಿ ಸಹಿ ಹಾಕದೆ ಇರುವ ಕಾರಣ ಬೆಳಗಾವಿಯ ಸಂಗಮೇಶ್ ಎಂಬ ಪಕ್ಷೇತರ ಅಭ್ಯರ್ಥಿಯ ನಾಮಪತ್ರ ತಿರಸ್ಕೃತವಾಗಿದೆ. ಹೀಗಾಗಿ ಕಾಂಗ್ರೆಸ್-4, ಬಿಜೆಪಿ-5 ಹಾಗೂ ಜೆಡಿಎಸ್ ಪಕ್ಷದ ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ.
ಜೂ.4ಕ್ಕೆ ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದ್ದು, ಆ ಬಳಿಕ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾದವರ ಹೆಸರುಗಳನ್ನು ಪ್ರಕಟಿಸಲಾಗುವುದು ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.