ಜೆಡಿಎಸ್ನಿಂದ ಮತದಾರರಿಗೆ ಹಣದ ಆಮಿಷ: ಶೋಭಾ ಕರಂದ್ಲಾಜೆ
ವಿಧಾನ ಪರಿಷತ್ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಚುನಾವಣೆ
ಬೆಂಗಳೂರು, ಜೂ.7: ವಿಧಾನಪರಿಷತ್ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಹಣದ ಆಮಿಷ ಒಡ್ಡುವ ಮೂಲಕ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಗುರುವಾರ ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ನಿಂದ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಜೆಡಿಎಸ್ನ ಎಸ್.ಎಲ್.ಬೋಜೆಗೌಡರ ಬೆಂಬಲಿಗ ಹೆಬ್ಬಾಲೆ ಖಾಸಗಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎನ್.ಧರ್ಮಪ್ಪ ಮತದಾರರಿಗೆ ಹಣದ ಆಮಿಷವೊಡ್ಡಿ ಬಂಧನಕ್ಕೆ ಒಳಗಾಗಿದ್ದಾರೆ. ಆ ಮೂಲಕ ಜೆಡಿಎಸ್ನ ನಿಜಬಣ್ಣ ಬಯಲಾಗಿದೆ ಎಂದು ಕಿಡಿಕಾರಿದರು.
ಇಡೀ ಶಿಕ್ಷಣ ವ್ಯವಸ್ಥೆಯನ್ನೆ ಹಾಳು ಮಾಡುವಂತಹ ಕೆಲಸಕ್ಕೆ ಆಡಳಿತ ಪಕ್ಷವಾಗಿರುವ ಜೆಡಿಎಸ್ ನಿಂತಿರುವುದು ಖೇದಕರವಾಗಿದೆ. ಆದರೆ, ಇವರ ಸ್ವಾರ್ಥಕ್ಕೆ, ಆಮಿಷಗಳಿಗೆ ನಾಡಿನ ವಿದ್ಯಾವಂತ, ಪ್ರಜ್ಞಾವಂತ ಪದವೀಧರರು ಹಾಗೂ ಶಿಕ್ಷಕರು ಬಲಿಯಾಗುವುದಿಲ್ಲ. ಸುಶಿಕ್ಷಿತ ಅಭ್ಯರ್ಥಿಗಳ ಪರ ಮತ ಹಾಕಲಿದ್ದಾರೆ ಎಂದು ಅವರು ಆಶಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ 5 ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಒಂದೇ ಒಂದು ಕಾಲೇಜು ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಕಾಂಗ್ರೆಸ್-ಜೆಡಿಎಸ್ನಿಂದ ಶಿಕ್ಷಕ ಕ್ಷೇತ್ರಕ್ಕೆ ಹಾಗೂ ಶಿಕ್ಷಕರಿಗೆ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಶಿಕ್ಷಕರು ಹಾಗೂ ಪದವೀಧರರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತ ಹಾಕಲಿದ್ದಾರೆ ಎಂದು ಅವರು ಆಶಯ ವ್ಯಕ್ತಪಡಿಸಿದರು.