ಚಕ್ರವರ್ತಿ ಸೂಲಿಬೆಲೆಯಿಂದ ಯೇಸು ಬಗ್ಗೆ ಅವಹೇಳನಕಾರಿ ಬರಹಕ್ಕೆ ಖಂಡನೆ
ಬೆಂಗಳೂರು, ಜ. 9: ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಯೇಸು ಕ್ರಿಸ್ತನ ಬಗ್ಗೆ ಆಧಾರರಹಿತವಾಗಿ ಮತ್ತು ಅವಹೇಳನಕಾರಿಯಾಗಿ ದಿನಪತ್ರಿಕೆಯೊಂದರ ಅಂಕಣದಲ್ಲಿ ಬರೆಯುವ ಮೂಲಕ ಅಸಹಿಷ್ಣತೆಯನ್ನು ಪ್ರಚೋದಿಸುತ್ತಿದ್ದಾರೆ ಎಂದು ಆಲ್ ಇಂಡಿಯಾ ಟ್ರೂ ಕ್ರಿಶ್ಚಿಯನ್ ಕೌನ್ಸಿಲ್ ತೀವ್ರವಾಗಿ ಖಂಡಿಸಿದೆ.
ಶನಿವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕೌನ್ಸಿಲ್ನ ರಾಜ್ಯಾಧ್ಯಕ್ಷ ಸಿ.ರಾಮು ಮಾತನಾಡಿ, ಚಕ್ರವರ್ತಿ ಸೂಲಿಬೆಲೆಯವರು ಅಂಕಣದಲ್ಲಿ ಯೇಸು ಕ್ರಿಸ್ತ ತಮ್ಮ 14ನೆ ವಯಸ್ಸಿನಲ್ಲಿ ಭಾರತಕ್ಕೆ ಬಂದು ಬುದ್ದನ ಅನುಯಾಯಿಗಳ ಬಳಿ ಆಧ್ಯಾತ್ಮಿಕ ಬೋಧನೆ ಪಡೆದಿದ್ದಾರೆ, ಅಲ್ಲದೆ ಕ್ರಿಸ್ತ ಶಿಲುಬೆ ಮೇಲೆ ಮರಣಿಸಿಲ್ಲ ಭಾರತದಲ್ಲೇ ಮರಣಿಸಿದ್ದಾರೆ ಎಂದು ಕಲ್ಪಿತವಾಗಿ ಬರೆಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂಕಣದಲ್ಲಿ ಕ್ರಿಸ್ತನ ಮತ್ತು ಕ್ರೈಸ್ತ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ. ಈ ಅವಹೇಳನಕಾರಿ ಹೇಳಿಕೆಗಳು ಪುರಾವೆರಹಿತ ಮತ್ತು ಅಧ್ಯಯನರಹಿತ. ಕ್ರಿಸ್ತನ ಬಗ್ಗೆ ಅವರಿಗೆ ಸರಿಯಾಗಿ ಗೊತ್ತಿಲ್ಲ ಎಂದ ಅವರು, ಈ ರೀತಿಯಾದ ಕಲ್ಪಿತ ಬರಹಗಳಿಂದ ಕ್ರೈಸ್ತ ಧರ್ಮಕ್ಕೆ ಮತ್ತು ನಂಬಿಕೆಗೆ ದಕ್ಕೆಯುಂಟು ಮಾಡುವುದು ಸರಿಯಲ್ಲ. ಇದು ಧಾರ್ಮಿಕ ನಿಂದನೆ ಹಾಗೂ ಅಸಹಿಷ್ಣುತೆಗೆ ದಾರಿಯಾಗುತ್ತದೆ ಎಂದು ಪ್ರಾತಿಪಾದಿಸಿದರು.
ಧರ್ಮದ ಬಗ್ಗೆ ಮತ್ತು ಸಂತರ ಬಗ್ಗೆ ಬರೆಯುವ ಮೊದಲು ಧರ್ಮದ ವಿದ್ವಾಂಸರು, ಇತಿಹಾಸಕಾರರಲ್ಲಿ ಚರ್ಚಿಸಿ ಗೊಂದಲಗಳನ್ನು ನಿವಾರಿಸಿಕೊಂಡು ಬರೆಯಬೇಕು ಎಂದ ಅವರು, ಯೇಸು ಕ್ರಿಸ್ತನ ಬಗ್ಗೆ ಬರೆಯುವ ಮೊದಲು, ಚಕ್ರವರ್ತಿ ಸೂಲಿಬೆಲೆಯವರು ಬೈಬಲ್ನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದರೆ ತಮ್ಮ ತಪ್ಪಿನ ಅರ್ಥವಾಗುತ್ತದೆ ಎಂದು ತಿಳಿಸಿದರು.
ದಲಿತ ಕ್ರಿಶ್ಚಿಯನ್ ಒಕ್ಕೂಟದ ಸಂಚಾಲಕ ಡಾ.ಮನೋಹರ್ಚಂದ್ರ ಪ್ರಕಾಶ್ ಮಾತನಾಡಿ, ಕ್ರಿಸ್ತನ ಕುರಿತು ಅವಹೇಳನಕಾರಿಯಾಗಿ ಅಂಕಣದಲ್ಲಿ ಚಿತ್ರಿಸಿರುವ ಕುರಿತು ಸ್ಪಷ್ಟಪಡಿಸುವಂತೆ ಈಗಾಗಲೇ ಚಕ್ರವರ್ತಿ ಸೂಲಿಬೆಲೆಗೆ ನ್ಯಾಯಾಲಯದ ಮುಖಾಂತರ ನೋಟಿಸ್ ಜಾರಿಗೊಳಿಸಲಾಗಿದೆ. ಇದಕ್ಕೆ ಕೂಡಲೆ ಉತ್ತರಿಸದಿದ್ದರೆ ಕಾನೂನಾತ್ಮಕ ಹೋರಾಟವನ್ನು ಮುಂದುವರೆಸಲಾಗುವುದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಸದಸ್ಯರಾದ ಎಸ್.ಸುರೇಶ್, ಚಂದ್ರಶೇಖರ್ ಸಂಸೋನ್ ಉಪಸ್ಥಿತರಿದ್ದರು.