ನಮ್ಮ ನಡುವೆ ವಿಷಪೂರಿತ ವಾತಾವರಣ: ವಿಚಾರವಾದಿ ಡಾ.ಜಿ.ರಾಮಕೃಷ್ಣ
ಬೆಂಗಳೂರು, ಜೂ.10: ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಲು ಸಾಧ್ಯವಾಗದ ರೀತಿಯಲ್ಲಿ ನಮ್ಮ ನಡುವೆ ವಿಷಪೂರಿತ ವಾತಾವರಣ ನಿರ್ಮಾಣವಾಗಿದೆ ಎಂದು ಹಿರಿಯ ಚಿಂತಕ, ವಿಚಾರವಾದಿ ಡಾ.ಜಿ.ರಾಮಕೃಷ್ಣ ಆಂತಕ ವ್ಯಕ್ತಪಡಿಸಿದರು.
ರವಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಾಡೋಜ ಡಾ.ಬರಗೂರು ಪ್ರತಿಷ್ಠಾನ ಆಯೋಜಿಸಿದ್ದ, ಸಮಾರಂಭದಲ್ಲಿ ‘ಪ್ರೊ.ಬರಗೂರು ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.
ನಮ್ಮ ಅಭಿಪ್ರಾಯ ಸ್ವಾತಂತ್ರವಾಗಿ ಹೇಳಿದರೂ ಕೊಲೆ ಮಾಡುವ, ಕಪಾಳಕ್ಕೆ ಹೊಡೆಯುವ ನಾಯಕರು ಇದೀಗ ಹುಟ್ಟಿಕೊಂಡಿದ್ದಾರೆ. ಈ ವಿಷಪೂರಿತ ವಾತಾವರಣದಲ್ಲಿಯೇ ನಾವು ಮಾತನಾಡಿ, ವಸ್ತುನಿಷ್ಠತೆಯ ಬಗ್ಗೆ ಚರ್ಚಿಸುತ್ತಿದ್ದೇವೆ ಎಂದು ಹೇಳಿದರು.
ನಮ್ಮಲ್ಲಿ ಬಹುತೇಕರು ಸಂಸ್ಕೃತ ಪಂಡಿತರು ಇದ್ದಾರೆ. ಆದರೆ, ಅವರೆಲ್ಲಾ ವಾಕ್ಯಗಳನ್ನು ಮಾತ್ರ ಹೇಳುತ್ತಾರೆ ವಿನಃ, ಯಾವುದೇ ಶಬ್ದದ ಬಗ್ಗೆ ಪಶ್ನೆಯ ಚರ್ಚೆಯಾಗಲಿ, ಗ್ರಹಿಸಲು ಮುಂದಾಗುವುದಿಲ್ಲ ಎಂದ ಅವರು, ಪ್ರಾಥಮಿಕ ದೃಷ್ಟಿಕೋನ ಇಟ್ಟುಕೊಂಡು ಯೋಚಿಸುವುದನ್ನೆ ನಮ್ಮ ಶಿಕ್ಷಣ ನೀಡಿಲ್ಲ ಎನ್ನುವುದೇ ನನಗೆ ಬಹುದೊಡ್ಡ ಬೇಸರ ಎಂದು ರಾಮಕೃಷ್ಣ ತಿಳಿಸಿದರು.