ವೈಚಾರಿಕತೆಯನ್ನೇ ಗುರಿಯಾಗಿಸಿ ಗೌರಿಗೆ ಗುಂಡು?
ಬೆಂಗಳೂರು, ಜೂ.13: ಗೌರಿ ಲಂಕೇಶ್ ವೈಚಾರಿಕತೆಯನ್ನೇ ಗುರಿಯಾಗಿಸಿಕೊಂಡು ಆಕೆಯನ್ನು ಹತ್ಯೆ ಮಾಡಲಾಗಿದೆ ಎನ್ನುವ ಶಂಕೆ ಪೊಲೀಸರಿಗೆ ಆರೋಪಿ ಪರಶುರಾಮ್ ವಾಗ್ಮೋರೆ ಬಂಧನದಿಂದ ನಿಜವಾಗಿದೆ.
ಈಗಾಗಲೇ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ವಶಕ್ಕೆ ಪಡೆದಿರುವ ಆರು ಆರೋಪಿಗಳಲ್ಲಿ ಬಹುತೇಕರು ಒಂದೊಂದು ಹಿಂದುತ್ವ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸಿಟ್ ತನಿಖಾಧಿಕಾರಿಗಳು ಸಹ ಅಪರಾಧ ಹಿನ್ನೆಲೆಯುಳ್ಳ ಹಿಂದೂತ್ವವಾದಿಗಳು, ಸಂಘಟನೆಗಳ ಮುಖ್ಯಸ್ಥರ ಚಲನೆ ಮೇಲೆ ನಿಗಾ ಇಟ್ಟು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಅಷ್ಟೇ ಅಲ್ಲದೆ, ಗೌರಿ ಲಂಕೇಶ್, ಧರ್ಮ ವಿರೋಧಿ ಹೇಳಿಕೆ ನೀಡುತ್ತಿದ್ದರು. ಸಂಘಪರಿವಾರ, ಅದರ ಮುಖಂಡರನ್ನು ಟೀಕೆ ಮಾಡುತ್ತಿದ್ದರು ಎನ್ನುವುದನ್ನೇ ಗುರಿಯಾಗಿಸಿಕೊಂಡು ಈ ಕೊಲೆ ನಡೆದಿದೆ ಎಂದು ವ್ಯಾಖ್ಯಾನ ಮಾಡಲಾಗುತ್ತಿದೆ.
ಬೈಕ್-ಪಿಸ್ತೂಲು: ಗೌರಿ ಲಂಕೇಶ್ ಹತ್ಯೆ ಸಂದರ್ಭದಲ್ಲಿ ಬಳಸಿದ್ದ ಪಿಸ್ತೂಲ್ ಮತ್ತು ಬೈಕ್ ಇನ್ನೂ ತನಿಖಾಧಿಕಾರಿಗಳಿಗೆ ಸಿಕ್ಕಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಬೈಕ್ನಲ್ಲಿ ಬಂದು ಗುಂಡು ಹಾರಿಸಿ ಪರಾರಿಯಾಗಿರುವ ಹಂತಕರ ಜಾಡು ಪತ್ತೆಯಾಗಿಲ್ಲ.
ಮುಖ್ಯಸ್ಥನಿಗಾಗಿ ಹುಡುಕಾಟ
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಈಗಾಗಲೇ ವಶಕ್ಕೆ ಪಡೆದಿರುವ ಆರೋಪಿಗಳು ಓರ್ವ ನಾಯಕ ಹೇಳಿರುವ ಕೆಲಸ ಮುಗಿಸಿಕೊಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಈ ನಾಯಕ ಯಾರು ಎಂಬ ಬಗ್ಗೆ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.