ಕುಮಾರಸ್ವಾಮಿ ಅಪ್ರಬುದ್ಧ ಮುಖ್ಯಮಂತ್ರಿ: ಅನಂತಕುಮಾರ್ ಹೆಗಡೆ ಟೀಕೆ
ಬೆಂಗಳೂರು, ಜೂ. 14: ‘ದೇಹ ಹಾಗೂ ಮಾನಸಿಕ ಫಿಟ್ನೆಸ್ ಇಲ್ಲದವರು ರಾಜ್ಯದ ಕಾಳಜಿ ಬಗ್ಗೆ ಮಾತನಾಡುವುದು ಶುದ್ಧ ಹಾಸ್ಯಾಸ್ಪದ’ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಟ್ವಿಟರ್ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.
ಪ್ರಧಾನಿ ಮೋದಿ ನೀಡಿದ್ದ ಫಿಟ್ನೆಸ್ ಚಾಲೆಂಜ್ ಅನ್ನು ನಿರಾಕರಿಸಿ ರಾಜ್ಯದ ಫಿಟ್ನೆಸ್ ಮುಖ್ಯ ಎಂದು ಹೇಳಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ‘ಅಪ್ರಬುದ್ಧ ಮುಖ್ಯಮಂತ್ರಿ’ ಎಂದು ಟೀಕಿಸಿರುವ ಅನಂತಕುಮಾರ್ ಹೆಗಡೆ, ಅಧಿಕಾರ ಸಿಗದ್ದಿದ್ದರೆ ನನಗೆ ಜಾಸ್ತಿ ಆಯುಷ್ಯವಿಲ್ಲ, ಸತ್ತೇ ಹೋಗುತ್ತೇನೆ ಎಂದು ಗೋಳಾಡಿಕೊಂಡ ಅಪ್ರಬುದ್ಧ ಮುಖ್ಯಮಂತ್ರಿಗೆ ಫಿಟ್ನೆಸ್ ಸವಾಲಿಗೆ ಪ್ರಧಾನಿಯವರು ಸೂಕ್ತವಾಗಿಯೇ ಪ್ರತ್ಯುತ್ತರ ನೀಡಲಿದ್ದಾರೆಂದು ಟೀಕಿಸಿದ್ದಾರೆ.
ಈ ಮಧ್ಯೆ ಮಲ್ಲೇಶ್ವರಂ ಕ್ಷೇತ್ರದ ಶಾಸನ ಡಾ.ಅಶ್ವತ್ಥ್ ನಾರಾಯಣ್, ರಾಜ್ಯದ ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುವ ಮುಖ್ಯಮಂತ್ರಿ, ಬೆಂಗಳೂರಿಗರಿಗೆ ಗುಂಡಿ ಭಾಗ್ಯ ನೀಡಿದ ಈ ಹಿಂದಿನ ಸರಕಾರದ ನಿಮ್ಮ ಮಿತ್ರ ಸಿದ್ದರಾಮಯ್ಯನವರ ವಿರುದ್ಧ ತನಿಖೆ ನಡೆಸುವ ಸಾಹಸಕ್ಕೆ ಕೈ ಹಾಕುವಿರೇ ಎಂದು ಟ್ವಿಟರ್ ಮೂಲಕ ಪ್ರಶ್ನಿಸಿದ್ದಾರೆ.