‘ಜನತಾ ದರ್ಶನದ ಅರ್ಜಿಗಳು ಇಲಾಖಾ ಮುಖ್ಯಸ್ಥರಿಗೆ ರವಾನೆ’
ಬೆಂಗಳೂರು, ಜೂ.21: ಮುಖ್ಯಮಂತ್ರಿಯವರ ಜನತಾ ದರ್ಶನದಲ್ಲಿ ಪ್ರತಿದಿನ ಸಾರ್ವಜನಿಕರ ಕುಂದುಕೊರತೆಗಳನ್ನು ನೀಗಿಸುವ ಸಲುವಾಗಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಈ ಅರ್ಜಿಗಳನ್ನು ‘ಮಾನ್ಯ ಮುಖ್ಯಮಂತ್ರಿಯವರ ಜನತಾ ದರ್ಶನ ಶೀರ್ಷಿಕೆಯಡಿ ’ www.espandana.karnataka.gov.in/cms ಗಣಕ ತಂತ್ರಾಂಶದಲ್ಲಿ ಮುಖ್ಯಮಂತ್ರಿಯವರ ಸಚಿವಾಲಯದಿಂದ ವಿವಿಧ ಇಲಾಖಾ ಮುಖ್ಯಸ್ಥರಿಗೆ ಅಪ್ಲೋಡ್ ಮಾಡಲಾಗುತ್ತಿದೆ ಎಂದು ಸರಕಾರದ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಎಲ್ಲ ಇಲಾಖಾ ಮುಖ್ಯಸ್ಥರಿಗೆ ಪ್ರತ್ಯೇಕ ಯೂಸರ್ ಐಡಿ ಹಾಗೂ ಪಾಸ್ವರ್ಡ್ಗಳನ್ನು ಈಗಾಗಲೆ ನೀಡಲಾಗಿದೆ.(ಯೂಸರ್ ಐಡಿ ಹಾಗೂ ಪಾಸ್ವರ್ಡ್ನ ಬಳಕೆಯಲ್ಲಿ ಹೆಚ್ಚಿನ ಮಾಹಿತಿಗಾಗಿ ರಾಜ್ಯ ಹೆಚ್ಚುವರಿ ಸಮಾಲೋಚಕ ಅಭಿಲಾಷ್, ಮೊಬೈಲ್ ಸಂಖ್ಯೆ: 9980820123, ಇ-ಮೇಲ್ ಐಡಿ: devpl.sakala@gmail.com ಇವರನ್ನು ಸಂಪರ್ಕಿಸಬಹುದು).
ಈ ಸಂಬಂಧ ಸರಕಾರದ ಎಲ್ಲ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ನಿಗಮ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು. ರಾಜ್ಯಮಟ್ಟದ, ಜಿಲ್ಲಾ ಮಟ್ಟದ ಇಲಾಖಾ ಮುಖ್ಯಸ್ಥರಾದ ಆಯುಕ್ತರು, ನಿರ್ದೇಶಕರಿಗೆ ಮುಖ್ಯಮಂತ್ರಿಯ ಜನತಾ ದರ್ಶನದ ಅಡಿಯಲ್ಲಿ ದಾಖಲಾಗುವ ಎಲ್ಲ ಅರ್ಜಿಗಳನ್ನು ವೈಯಕ್ತಿಕವಾಗಿ ಪರಿಶೀಲಿಸಿ, ಗುಣಾತ್ಮಕ ನಿರ್ಣಯ ಕೈಗೊಂಡು, ಸೂಕ್ತ ಹಿಂಬರಹದೊಂದಿಗೆ, ಕಾಲಮಿತಿಯೊಳಗೆ ವಿಲೇವಾರಿ ಮಾಡಿ, www.espandana.karnataka.gov.in/cms ತಂತ್ರಾಂಶಕ್ಕೆ ಅಪ್ಲೋಡ್ ಮಾಡುವುದರೊಂದಿಗೆ, ಯಾವುದೇ ಸೂಕ್ತ, ಸಕಾರಣ ಮಾಹಿತಿಯ ಹಿಂಬರಹವಿಲ್ಲದೆ, ಅರ್ಜಿಯನ್ನು ಮುಕ್ತಾಯಗೊಳಿಸುವಂತಿಲ್ಲ ಎಂಬ ಸೂಚನೆಯನ್ನು ಮುಖ್ಯಮಂತ್ರಿಯ ನಿರ್ದೇಶನದಂತೆ ನೀಡಲಾಗಿದೆ ಎಂದು ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.