ಬೆಂಗಳೂರು: ಮಾನವೀಯತೆ ಮೆರೆದ ಪೇದೆಗೆ ಸನ್ಮಾನ
ಬೆಂಗಳೂರು, ಜೂ.23: ಅನಾಥ ಮಗುವನ್ನು ಠಾಣೆಗೆ ಕರೆತಂದು ಆರೈಕೆ ಮಾಡಿ, ಹಾಲುಣಿಸಿ ಮಾನವೀಯತೆ ಮೆರೆದಿದ್ದ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸ್ ಮಹಿಳಾ ಪೇದೆ ಅರ್ಚನಾ ಅವರಿಗೆ ಬಿಬಿಎಂಪಿ ಮೇಯರ್ ಆರ್.ಸಂಪತ್ರಾಜ್ ಸನ್ಮಾನಿಸಿದರು.
ಶನಿವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪದಕ, ಸೀರೆ, ನಗದು ಬಹುಮಾನ ನೀಡಿದರು. ನಂತರ ಮಾತನಾಡಿದ ಆರ್.ಸಂಪತ್ ರಾಜ್, ದಾರಿಯಲ್ಲಿ ಸಿಕ್ಕ ಮಗುವನ್ನು ತಮ್ಮದೇ ಮಗುವೆಂದು ಭಾವಿಸಿ ಆರೈಕೆ ಮಾಡಿ, ತಮ್ಮ ಎದೆ ಹಾಲುಣಿಸಿದ್ದರು. ಹೆತ್ತ ಮಕ್ಕಳ ಮೇಲೆ ಕರುಣೆ ಇಲ್ಲದೆ ರಸ್ತೆ, ಕಸದ ತೊಟ್ಟಿಯಲ್ಲಿ ಬಿಟ್ಟು ಹೋಗುವ ತಾಯಂದಿರು ಇವರನ್ನು ನೋಡಿ, ಮಾನವೀಯತೆ ಮೈಗೂಡಿಸಿ ಕೊಳ್ಳಬೇಕಿದೆ ಎಂದು ಹೇಳಿದರು.
ಕೆಂಪೇಗೌಡ ಪ್ರಶಸ್ತಿಗೆ ಅರ್ಚನ ಅವರನ್ನು ಆಯ್ಕೆ ಮಾಡಲಾಗಿದೆ. ಜು.27ರಂದು ನಗರದ ಅರಮನೆ ಮೈದಾನದಲ್ಲಿ ನಡೆಯುವ ನಾಡಪ್ರಭು ಕೆಂಪೇಗೌಡ ಜಯಂತಿಯಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಮೇಯರ್ ತಿಳಿಸಿದರು.
ಪೇದೆ ಅರ್ಚನಾ ಮಾತನಾಡಿ, ಅನಾಥವಾಗಿ ಸಿಕ್ಕ ಮಗುವನ್ನು ಪೊಲೀಸ್ ಠಾಣೆಗೆ ಕರೆತಂದು ಆರೈಕೆ ಮಾಡಿದ್ದೆವು. ಆದರೆ, ಏಳು ದಿನಗಳ ಬಳಿಕ ಆ ಮಗು ಮೃತಪಟ್ಟಿದ್ದು, ಇದು ನನಗೆ ಆಘಾತ ತಂದಿದೆ. ಹಸುಗೂಸುಗಳನ್ನು ಯಾವ ತಂದೆ-ತಾಯಿಗಳು ರಸ್ತೆಯಲ್ಲಿ ಬಿಟ್ಟು ಹೋಗಬೇಡಿ ಎಂದು ಮನವಿ ಮಾಡಿದರು.