ಜಾತಿ ಪದ್ಧತಿ ನಾಶವಾಗದೆ ರಾಷ್ಟ್ರೀಯತೆಗೆ ಅರ್ಥವಿಲ್ಲ: ಹಿರಿಯ ಲೇಖಕ ಡಾ.ನಟರಾಜ ಹುಳಿಯಾರ್
ಬೆಂಗಳೂರು, ಜೂ.24: ದೇಶದಲ್ಲಿ ಜಾತಿ ಪದ್ಧತಿ ನಿರ್ಮೂಲನೆ ಆಗದೆ ರಾಷ್ಟ್ರೀಯತೆಗೆ ಯಾವುದೇ ರೀತಿಯ ಅರ್ಥ ಇರುವುದಿಲ್ಲ ಎಂದು ಹಿರಿಯ ಲೇಖಕ ಡಾ.ನಟರಾಜ ಹುಳಿಯಾರ್ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಅಹರ್ನಿಶಿ ಪ್ರಕಾಶನ ಹಾಗೂ ಬಯಲು ಬಳಗ ನಗರದ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಆಯೋಜಿಸಿದ್ದ ಲೇಖಕ ವಿಕಾಸ್ ಆರ್.ಮೌರ್ಯರವರ ‘ಚಮ್ಮಟಿಗೆ’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಇತ್ತೀಚೆಗೆ ದೇಶದಲ್ಲಿ ರಾಷ್ಟ್ರೀಯತೆ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಡಾ.ಬಿ.ಆರ್.ಅಂಬೇಡ್ಕರ್ ‘ದೇಶದಲ್ಲಿ ಜಾತಿ ಪದ್ಧತಿ ನಿರ್ಮೂಲನೆಗೊಂಡು ಸಾಮಾಜಿಕವಾಗಿ ಒಗ್ಗೂಡದಿದ್ದರೆ ರಾಷ್ಟ್ರೀಯತೆ ಯಾವತ್ತಿಗೂ ಸಾಧ್ಯವಾಗುವುದಿಲ್ಲವೆಂದು’ ಸ್ಪಷ್ಟಪಡಿಸಿದ್ದರು. ಹೀಗಾಗಿ ದೇಶಾದ್ಯಂತ ಜಾತಿಶೋಷಣೆ ಇವತ್ತಿಗೂ ಜೀವಂತವಾಗಿರುವುದರಿಂದ ರಾಷ್ಟ್ರೀಯತೆಗೆ ಅರ್ಥವಿಲ್ಲವೆಂದು ತಿಳಿಸಿದರು.
ರಾಜ್ಯದ ಯಾವುದೇ ಮೂಲೆಯಲ್ಲಿ ಬಾಡಿಗೆ ಮನೆಯನ್ನು ಪಡೆಯಲಾಗದ ದಲಿತನೊಬ್ಬ ಈ ದೇಶವನ್ನು ಯಾಕೆ ಪ್ರೀತಿಸಬೇಕೆಂಬ ಪ್ರಶ್ನೆಗಳು ಕಾಡದೆ ಇರಲಾರದು. ಆದಾಗ್ಯು ದೇಶದಲ್ಲಿ ಪ್ರಜಾತಂತ್ರ ಜೀವಂತವಾಗಿರುವುದಕ್ಕೆ ದಲಿತ ಹಾಗೂ ಅಲ್ಪಸಂಖ್ಯಾತರು ಚುನಾವಣೆ ಸಂದರ್ಭದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಿರುವುದೇ ಪ್ರಮುಖ ಅಂಶವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ಜಾತಿ ದೌರ್ಜನ್ಯಗಳ ಕುರಿತು ಕೆಲವು ದಲಿತ ಸಂಘಟನೆಗಳು ಮಾತ್ರ ಧ್ವನಿ ಎತ್ತುತ್ತಿವೆ. ಇತರೆ ಹಿಂದುಳಿದ ಸಮುದಾಯದ ನಾಯಕರು ದೌರ್ಜನ್ಯಕಾರರ ವಿರುದ್ಧ ಯಾಕೆ ಹೋರಾಟ ರೂಪಿಸಿಲ್ಲತ್ತಿಲ್ಲ ಎಂಬುದರ ಬಗ್ಗೆ ಗಂಭೀರ ಚಿಂತನೆ ನಡೆಯಬೇಕು. ಆ ಮೂಲಕ ಅಂಬೇಡ್ಕರ್ ವಿಚಾರಗಳನ್ನು ಎಲ್ಲ ಸಮುದಾಯಕ್ಕೂ ಕೊಂಡೊಯ್ಯುವಂತಹ ಕೆಲಸವಾಗಬೇಕಿದೆ ಎಂದು ಅವರು ಹೇಳಿದರು.
ಮಹಾತ್ಮ ಗಾಂಧೀಜಿಯನ್ನು ಪ್ರಗತಿಪರ ಹಾಗೂ ದಲಿತ ಸಂಘಟನೆಗಳು ಸಾರಾಸಗಟಾಗಿ ತಿರಸ್ಕರಿಸುವ ಅಗತ್ಯವಿಲ್ಲ. ದೇಶದ ಮೊದಲ ರಾಷ್ಟ್ರಪತಿ ದಲಿತ ವ್ಯಕ್ತಿಯೊಬ್ಬರು ಆಗಬೇಕೆಂದು ಬಯಸಿದ್ದರು. ಹಾಗೂ ತಮ್ಮ ಆಶ್ರಮದಲ್ಲಿ ಜಾತಿ ಪದ್ಧತಿಯನ್ನು ನಿರ್ಮೂಲನೆಗೊಳಿಸಿದ್ದರು. ಹೀಗೆ ಗಾಂಧೀಜಿಯ ಹಲವು ಚಿಂತನೆಗಳು ಪ್ರಗತಿಪರ ಚಿಂತನೆಗಳಿಗೆ ಪೂರಕವಾಗಿದ್ದು, ಆ ಚಿಂತನೆಗಳ ಮೂಲಕ ಮನುವಾದಿಗಳಿಗೆ ತಕ್ಕ ಪ್ರತಿರೋಧ ಹೊಡ್ಡಬೇಕಾಗಿದೆ ಎಂದು ಅವರು ಹೇಳಿದರು.
ಮನೆಯಿಂದಲೆ ಪ್ರಗತಿಪರ ಚಳವಳಿಯ ಚಿಂತನೆಗಳು ಮೊಳಕೆ ಹೊಡೆಯಬೇಕಾಗಿದೆ. ತಮ್ಮ ಮನೆಗಳಲ್ಲಿ ಮಾರ್ಕ್ಸ್, ಲೋಹಿಯಾ, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಹಲವು ಸಮಾಜಪರ ಚಿಂತಕರ ಕುರಿತ ಪುಸ್ತಕಗಳು ಇಟ್ಟು, ಮನೆಯ ಮಕ್ಕಳಿಗೆ ಪರಿಚಯಿಸಬೇಕೆಂದು ಅವರು ಆಶಿಸಿದರು.
ಹಿರಿಯ ಪತ್ರಕರ್ತ ಮಂಜುನಾಥ ಅದ್ದೆ ಮಾತನಾಡಿ, ಇವತ್ತಿನ ಬಿಕ್ಕಟ್ಟಿನ ಕಾಲಘಟ್ಟದಲ್ಲಿ ಪ್ರಗತಿಪರ ಚಿಂತನೆಗಳು ಪುನರ್ ನಿರೂಪಿಸಿಕೊಳ್ಳುವ ಅಗತ್ಯವಿದೆ. ಕನಿಷ್ಟ ಆಡಳಿತದ ನೀತಿ ನಿರೂಪಣೆಗಳ ಮೇಲೆ ಪ್ರಭಾವ ಬೀರುವಂತಹ ಮಟ್ಟಕ್ಕಾದರು ಶಕ್ತಿಯುತವಾಗಬೇಕಿದೆ ಎಂದು ಆಶಿಸಿದರು.
ಪ್ರಗತಿಪರ ಚಳವಳಿಯಲ್ಲಿರುವ ಜಾತಿ ಗುಂಪುಗಳನ್ನು ಹೋಗಲಾಡಿಸಿ ವಿಶಾಲವಾದ ವ್ಯಾಪ್ತಿಯಲ್ಲಿ ಒಳಗೊಳ್ಳಬೇಕಾಗಿದೆ. ಪ್ರಗತಿಪರರ ಗೆಲವು ಇರುವುದು ಬುದ್ಧವಂತಿಕೆ ಹಾಗೂ ಅಸ್ತ್ರದಿಂದಲ್ಲ. ನಾನು ಮನುಷ್ಯ-ನೀನು ಮನಷ್ಯನೆಂದು ಕಾಣುವುದರಲ್ಲಿ ಎಂಬುದನ್ನು ಸರಳ ಸೂತ್ರವನ್ನು ಮನಗಾಣಬೇಕೆಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಜಗೆರೆ ಜಯಪ್ರಕಾಶ್ ವಹಿಸಿದ್ದರು. ಈ ವೇಳೆ ದಲಿತ ಹೋರಾಟಗಾರ ಎನ್.ವೆಂಕಟೇಶ್, ಲೇಖಕ ವಿಕಾಸ್ ಆರ್.ವೌರ್ಯ ಹಾಗೂ ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ ಇದ್ದರು. ಕವಿ ಹುಲಿಕುಂಟೆ ಮೂರ್ತಿ ನಿರೂಪಣೆ ಮಾಡಿದರು.
‘ಉತ್ಪಾದನಾ ಚಟುವಟಿಕೆಯ ಮೇಲೆ ಪ್ರಗತಿಪರ ಸಂಘಟನೆಗಳು ಹಿಡಿತ ಸಾಧಿಸದಿದ್ದರೆ, ಎಷ್ಟು ವರ್ಷಗಳು ಕಳೆದರೂ ಕೇವಲ ಪ್ರತಿಭಟನೆ ಮಾಡುವುದಕ್ಕೆ ಸೀಮಿತವಾಗಬೇಕಾಗುತ್ತದೆ. ಈ ಎಚ್ಚರವನ್ನಿಟ್ಟುಕೊಂಡು ಪ್ರಗತಿಪರ ಚಳವಳಿ ತತ್ವ ಸಿದ್ಧಾಂತ ರೂಪಿಸಬೇಕಿದೆ’
-ಮಂಜುನಾಥ ಅದ್ದೆ, ಹಿರಿಯ ಪತ್ರಕರ್ತ