ಇನ್ನೂ ಎಷ್ಟು ಚಿತ್ರಹಿಂಸೆ ಕೊಡಬೇಕೊ ಕೊಡಲಿ : ಬಿಎಸ್ ವೈ ವಿರುದ್ಧ ಡಿಕೆಶಿ ವಾಗ್ದಾಳಿ
ಬೆಂಗಳೂರು, ಜೂ.29: ‘ನನಗೆ ಇನ್ನೂ ಎಷ್ಟು ಚಿತ್ರಹಿಂಸೆ ಕೊಡಬೇಕು ಅಂದುಕೊಂಡಿದ್ದಾರೋ, ಅದನ್ನೆಲ್ಲಾ ಕೊಡಲಿ’ ಎಂದು ತಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ವಿರುದ್ಧ ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಶುಕ್ರವಾರ ನಗರದ ಕುಮಾರಕೃಪಾ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇನು ಚೆಕ್ ಮೂಲಕ ಲಂಚ ತೆಗೆದುಕೊಂಡಿಲ್ಲ. ಯಡಿಯೂರಪ್ಪನವರ ದಾಖಲೆಗಳು ಬೇಕಾದರೆ ನಾನೇ ಕೊಡುತ್ತೇನೆ ಎಂದರು.
ನಾನು ಇಲಾಖೆಯಲ್ಲಿ ಇನ್ನೂ ಕಣ್ಣು ಬಿಟ್ಟಿಲ್ಲ. ಒಂದು ಕಡತಕ್ಕೂ ಸಹಿ ಹಾಕಿಲ್ಲ. ಬಿಲ್ಗಳನ್ನು ಪಾವತಿ ಮಾಡುವ ಕೆಲಸಕ್ಕೂ ಕೈ ಹಾಕಿಲ್ಲ. ಆಗಲೇ ಯಡಿಯೂರಪ್ಪಗೆ ನಾನು ಕಮಿಷನ್ ಪಡೆಯುತ್ತಿದ್ದೇನೆ ಎಂಬ ಕನಸು ಬೀಳುತ್ತಿದೆ ಎಂದು ಶಿವಕುಮಾರ್ ವ್ಯಂಗ್ಯವಾಡಿದರು.
ಯಡಿಯೂರಪ್ಪ ಬೇಕಾದರೆ ಆದಾಯ ತೆರಿಗೆ ಇಲಾಖೆ, ಎಸಿಬಿಗೆ ನನ್ನ ವಿರುದ್ದ ದೂರು ನೀಡಲಿ. ಸಾಕ್ಷಿಯಿದ್ದರೆ ಕರೆದುಕೊಂಡು ಬಂದು ಹೇಳಿಕೆ ಕೊಡಿಸಲಿ, ವಿಧಾನಸೌಧಕ್ಕೆ ಬಂದು ಚರ್ಚೆಗೆ ಕುಳಿತುಕೊಳ್ಳಲಿ ಎಂದು ಅವರು ಹೇಳಿದರು.