ಅನಧಿಕೃತ ಜಾಹೀರಾತು ಫಲಕ ತೆರವು: 17 ಪ್ರಕರಣ ದಾಖಲು
ಬೆಂಗಳೂರು, ಜೂ.30: ಬಿಬಿಎಂಪಿ ಅಧಿಕಾರಿಗಳು ಮತ್ತು ವೈಟ್ಫೀಲ್ಡ್ ವಿಭಾಗದ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ರಸ್ತೆ ಬದಿ ವಿದ್ಯುತ್ ಕಂಬಗಳಿಗೆ ಹಾಕಿದ್ದ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಿ 17 ಪ್ರಕರಣ ದಾಖಲು ಮಾಡಿದ್ದಾರೆ.
ಶನಿವಾರ ನಗರದ ಮಾರತಹಳ್ಳಿ ಮೇಲ್ಸೇತುವೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಕಲಾಗಿದ್ದ ಅನಧಿಕೃತ ಜಾಹೀರಾತು ಫಲಕಗಳನ್ನು ವೈಟ್ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್, ಮಹದೇವಪುರ ವಲಯದ ಬಿಬಿಎಂಪಿ ಜಂಟಿ ಆಯುಕ್ತ ವಾಸಂತಿ ಅಮರ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.
ವ್ಯಾಪಾರ ಮಳಿಗೆ ಕಟ್ಟಡಗಳಲ್ಲಿ, ರಸ್ತೆಬದಿಯ ವಿದ್ಯುತ್ ಕಂಬಗಳಿಗೆ, ಸಾಲುಮರಗಳಲ್ಲಿ ಸೇರಿದಂತೆ ವಿವಿಧೆಡೆ ಪ್ರದರ್ಶನಕ್ಕೆ ಹಾಕಿದ್ದ ನೂರಾರು ಜಾಹೀರಾತುಗಳನ್ನು ಫಲಕಗಳನ್ನು ತೆರವುಗೊಳಿಸಿ, ಪುನಃ ಅಳವಡಿಸದಂತೆ ಪೊಲೀಸರು ಎಚ್ಚರಿಕೆ ನೀಡಿದರು.
ಪ್ರಕರಣ: ಭೀಮಾ ಜ್ಯೂವಲರ್ಸ್, ಅತಿಥಿ ರೆಸಿಡೆನ್ಸಿ, ಶ್ರೀ ಸಾಯಿ ದರ್ಶಿನಿ, ಟೆಸ್ಟಿಂಗ್ ಟೂಲ್ಸ್, ಅನ್ನೀ ಮ್ಯೂಸಿಕ್ ಶಾಪ್, ಲ್ಯಾಂಕೋಸ್, ಫ್ರೂಟ್ ಫಿಟ್ನೆಸ್, ಗ್ಲೀನ್ ಶಾಫ್, ಎನಿಮೆಂಟ್ ಐಟಿ ಇನ್ಫೋ, ರಾಜಾ ರೈ ಹೊಟೇಲ್, ಮೈಂಡ್ ಅಂಡ್ ಸಿಸ್ಟಮ್ ಕಂಪೆನಿ, ಬ್ಯಾಂಕ್ ಟು ಕ್ಯಾಂಪಸ್ ಹೊಟೇಲ್ ಹಾಗೂ ಜಂಬ್ರೋಸ್ ಸೀನಿಯರ್ ಕಂಪೆನಿ ಎಂಬ ಹೆಸರಿನ ಮಳಿಗೆ, ಹೊಟೇಲ್, ಕಂಪೆನಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ.