ಬಜೆಟ್ನಲ್ಲಿ ಸರಕಾರಿ ಶಾಲೆಗಳನ್ನು ಉಳಿಸಿ: ವಿ.ಪಿ.ನಿರಂಜನಾರಾಧ್ಯ
ಬೆಂಗಳೂರು, ಜು. 2: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಸ್ತುತ ಸಾಲಿನಲ್ಲಿ ಮಂಡಿಸಲಿರುವ ಬಜೆಟ್ನಲ್ಲಿ ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಮಹಾಪೋಷಕ ವಿ.ಪಿ.ನಿರಂಜನಾರಾಧ್ಯ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ 10ಕ್ಕಿಂತ ಕಡಿಮೆ ಮಕ್ಕಳಿರುವ ಸುಮಾರು 3,347 ಕಿರಿಯ ಪ್ರಾಥಮಿಕ ಶಾಲೆಗಳು ಹಾಗೂ 57 ಹಿರಿಯ ಪ್ರಾಥಮಿಕ ಶಾಲೆಗಳಿವೆ. ಇವು ಅಪಾಯದ ಅಂಚಿನಲ್ಲಿರುವ ಸರಕಾರಿ ಶಾಲೆಗಳಾಗಿದ್ದು, ಶೀಘ್ರ ಪೂರ್ವ-ಪ್ರಾಥಮಿಕ ತರಗತಿ ಪ್ರಾರಂಭಿಸಬೇಕು. ಅದೇ ರೀತಿ, ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮಂಡಿಸಿದ ಬಜೆಟ್ನಲ್ಲಿ 23,350 ಕೋಟಿಯನ್ನು ಶಿಕ್ಷಣಕ್ಕೆ ಒದಗಿಸಿದ್ದರು. ಇದು ಒಟ್ಟು ಆಯವ್ಯಯದ ಶೇಕಡ 11.05 ರಷ್ಟಿದ್ದು, ಈಗ ಮಂಡಿಸಲಿರುವ ಬಜೆಟ್ನಲ್ಲಿ ಶಾಲಾ ಶಿಕ್ಷಣಕ್ಕೆ ಶೇಡ 15ರಷ್ಟನ್ನು ಮೀಸಲಿಡಬೇಕು.
ಶಾಲಾಹಂತದಲ್ಲಿ ರಚನೆಯಾಗಿರುವ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು ಸರಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ ನೆರೆಹೊರೆಯ ಸಮಾನ ಶಾಲೆಗಳನ್ನಾಗಿ ಪರಿವರ್ತಿಸಲು ಶಕ್ತಿ ಮೀರಿ ಕೆಲಸ ನಿರ್ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ, ಶಾಲಾಹಂತದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು ಎಲ್ಲ 18 ಜನ ಚುನಾಯಿತ ಸದಸ್ಯರಿಗೆ ಮತ್ತು ಉಳಿದ ಪದವಿನಿಮಿತ್ತ ಹಾಗು ನಾಮನಿರ್ದೇಶನ ಸದಸ್ಯರಿಗೆ ಶಾಲಾ ಹಂತದಲ್ಲಿಯೇ ತರಬೇತಿ ನೀಡುವ ಕುರಿತು ಬಜೆಟ್ನಲ್ಲಿ ಉಲ್ಲೇಖಿಸಬೇಕು ಎಂದು ಒತ್ತಾಯಿಸಿದ್ದಾರೆ.
ಖಾಲಿ ಉಳಿದಿರುವ 28,582 ಶಿಕ್ಷಕರ ಹುದ್ದೆಗಳನ್ನು ಭರ್ತಿಗೆ ಬಜೆಟ್ನಲ್ಲಿ ಪ್ರಸ್ತಾಪಿಸಿ ಹಣ ಮೀಸಲಿಡಬೇಕು. 2017 ರಲ್ಲಿ ರಾಜ್ಯ ಸರಕಾರಕ್ಕೆ ಸಲ್ಲಿಸಿರುವ ಸರಕಾರಿ ಶಾಲೆಗಳ ಸಬಲೀಕರಣ ಸಮಿತಿಯ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಅವಶ್ಯಕವಾದ ರೂಪು-ರೇಷೆಗಳನ್ನು ರೂಪಿಸಿ ಜಾರಿಗೊಳಿಸಲು ವರದಿಯಲ್ಲಿನ ಶಿಫಾರಸಿನಂತೆ ಉನ್ನತ ಮಟ್ಟದ ಸಲಹಾ ಸಮಿತಿಯನ್ನು ರಚಿಸುವ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪಿಸಬೇಕು.
ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಪ್ರವೇಶ, ಶುಲ್ಕ ಮತ್ತು ಮಕ್ಕಳ-ಪಾಲಕರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳನ್ನು ನಿಯಂತ್ರಿಸಲು ವಿಶೇಷ ಕಾನೂನನ್ನು ರೂಪಿಸುವ ಬಗ್ಗೆ ಬಜೆಟ್ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಸ್ತಾಪಿಸಬೇಕು ಎಂದು ನಿರಂಜನಾರಾಧ್ಯ ಮನವಿ ಮಾಡಿದ್ದಾರೆ.