ಗ್ರಾಮೀಣ ಉದ್ಯಮಶೀಲತೆಗೆ ಉತ್ತೇಜನ: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು, ಜು. 4: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮಕ್ಕಳಿಗೆ ಉದ್ಯೋಗ ಆಧರಿತ ತರಬೇತಿ, ಗ್ರಾಮೀಣ ಉದ್ಯಮಶೀಲತೆಗೆ ಉತ್ತೇಜನ ನೀಡುವ ಯೋಜನೆಯನ್ನು ರೂಪಿಸಲು ಸರಕಾರ ಕ್ರಮ ವಹಿಸಲಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ಬಿಜೆಪಿ ಹಿರಿಯ ಸದಸ್ಯ ಗೋವಿಂದ ಕಾರಜೋಳ ನೀಡಿದ ಸಲಹೆಗೆ ಪ್ರತಿಕ್ರಿಯೆ ನೀಡಿದ ಅವರು, ಪರಿಶಿಷ್ಟ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು. ಅಲ್ಲದೆ, ಹೈ.ಕ. ಮತ್ತು ಉ.ಕ. ಅಭಿವೃದ್ಧಿಗೆ ಬಜೆಟ್ನಲ್ಲಿ ವಿಶೇಷ ಯೋಜನೆ ಪ್ರಕಟಿಸಲಾಗುವುದು ಎಂದರು.
ಪರಿಶಿಷ್ಟರಿಗೆ ಭೂಮಿ ಖರೀದಿಸಿ ಕೊಡುವ ಕೃಷಿ ಒಡೆತನ ಯೋಜನೆಯಲ್ಲಿನ ಕೆಲ ತಾಂತ್ರಿಕ ದೋಷಗಳ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಶೀಘ್ರದಲ್ಲೆ ಈ ಸಂಬಂಧ ಸಮಾಲೋಚನೆ ನಡೆಸಿ ಭೂಮಿ ಕೊಡಿಸಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಕೇಂದ್ರದ ಮೋದಿ ಸರಕಾರ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂದು ಹೇಳುತ್ತದೆ. ಆದರೆ, ಪರಿಶಿಷ್ಟ ಉಪ ಯೋಜನೆಯಡಿ(ಎಸ್ಟಿಪಿ-ಟಿಎಸ್ಪಿ) ಅನುದಾನವನ್ನೆ ನೀಡುತ್ತಿಲ್ಲ. ನಿಜಕ್ಕೂ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಕರ್ನಾಟಕದಲ್ಲಿ ಮಾತ್ರ ಅನುಷ್ಠಾನ ಆಗುತ್ತಿದೆ ಎಂದರು.
‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಒಂದು ರೀತಿಯಲ್ಲಿ ನಾ ಕಿಸಿಕೇ ಸಾಥ್, ನಾ ಕಿಸಿಕೇ ವಿಕಾಸ್(ಯಾರ ಜೊತೆಯೂ ಇಲ್ಲ, ಯಾರ ವಿಕಾಸವೂ ಇಲ್ಲ) ಎಂಬಂತೆ ಆಗಿದೆ’
-ಕೆ.ಆರ್.ರಮೇಶ್ ಕುಮಾರ್, ಸ್ಪೀಕರ್