ಉದ್ಯಮಿಗಳಿಂದ ಮಾಧ್ಯಮದ ನಿಯಂತ್ರಣ: ದಿನೇಶ್ ಅಮೀನ್ ಮಟ್ಟು
ಬೆಂಗಳೂರು, ಜು.7: ಇತ್ತೀಚಿನ ದಿನಗಳಲ್ಲಿ ಉದ್ಯಮಿಪತಿಗಳು ಹಾಗೂ ಜಾಹೀರಾತುಗಳು ಮಾಧ್ಯಮವನ್ನು ನಿಯಂತ್ರಿಸುತ್ತಿವೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿನ ಸಂದರ್ಭದಲ್ಲಿ ಸುದ್ದಿಗಿಂತ ಜಾಹೀರಾತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಪತ್ರಿಕೆಗಳಿಗೆ ಓದುಗರಿಗಿಂತ, ಜಾಹೀರಾತುದಾರ ಗ್ರಾಹಕರು ಮುಖ್ಯವಾಗುತ್ತಿದ್ದಾರೆ. ಇಂದು ಉತ್ಪಾದಕ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಪತ್ರಿಕೆಗಳು ಮಾರಾಟವಾಗುತ್ತಿವೆ ಎಂದು ತಿಳಿಸಿದರು.
ಮಾಧ್ಯಮಗಳು ಇದುವರೆಗೂ ಎಷ್ಟು ಜನ ಉದ್ಯಮಿಪತಿಗಳ ಅಕ್ರಮಗಳ ಕುರಿತು ತನಿಖೆ ನಡೆಸಿ ವರದಿಗಳನ್ನು ಪ್ರಕಟಿಸಿವೆ ಎಂದು ಪ್ರಶ್ನಿಸಿದ ಅವರು, ರಾಜಕಾರಣಿಗಳು ಒಂದು ಎಕರೆ ಭೂಮಿಯನ್ನು ಅಕ್ರಮ ಡಿ ನೋಟಿಫಿಕೇಷನ್ ಮಾಡಿದರೂ ದಿನಪೂರ್ತಿ ಚರ್ಚೆ ನಡೆಸುತ್ತಾರೆ. ಅಂದರೆ, ಇಂದಿನ ಮಾಧ್ಯಮ ಉದ್ಯಮಿಗಳ ಜಾಹೀರಾತಿನ ಮೇಲೆ ನಿಂತಿದೆ. ಅಲ್ಲದೆ, ಇತ್ತೀಚಿಗೆ ಉದ್ಯಮಿಗಳು ರಾಜಕಾರಣಿಗಳಾಗಿ ಮಾಧ್ಯಮವನ್ನು ನಿಯಂತ್ರಿಸಲು ಮುಂದಾಗಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದರು.
ಇತ್ತೀಚಿನ ದಿನಗಳಲ್ಲಿ ಡಾಕ್ಟರ್, ಎಂಜಿನಿಯರ್, ಸಾಹಿತಿಗಳು ಸೇರಿದಂತೆ ಎಲ್ಲ ರಂಗಗಳು ಯಾವ ರೀತಿಯಲ್ಲಿ ಭ್ರಷ್ಟಾಚಾರಕ್ಕೆ ಗುರಿಯಾಗುತ್ತಿವೆಯೋ, ಅದೇ ರೀತಿಯಲ್ಲಿ ಮಾಧ್ಯಮ ರಂಗವೂ ಭ್ರಷ್ಟಾಚಾರಕ್ಕೊಳಗಾಗುತ್ತಿದೆ. ಪತ್ರಕರ್ತರು ಭ್ರಷ್ಟಾಚಾರಿಗಳಾಗುತ್ತಿದ್ದಾರೆ. ಹೀಗಾಗಿ, ಮಾಧ್ಯಮ ರಂಗಕ್ಕಿಡಿದ ರೋಗ ಬಿಡಿಸದಿದ್ದರೆ, ಸಮಾಜಕ್ಕಿಡಿದ ರೋಗ ನಿರ್ಮೂಲನೆ ಮಾಡಲು ಅಸಾಧ್ಯ ಎಂದು ಅವರು ಹೇಳಿದರು.
ಮಾಧ್ಯಮವನ್ನು ಸಂವಿಧಾನದ ನಾಲ್ಕನೇ ಸ್ತಂಭ ಎಂದು ನಮಗೆ ನಾವೇ ಕಲ್ಪಿಸಿಕೊಂಡಿದ್ದೇವೆ. ಆದರೆ, ಸಂವಿಧಾನದಲ್ಲಿ ಎಲ್ಲಿಯೂ ಇದರ ಬಗ್ಗೆ ಉಲ್ಲೇಖವಿಲ್ಲ. ಅಲ್ಲದೆ, ಡಾ.ಬಿ.ಆರ್.ಅಂಬೇಡ್ಕರ್ ಅವರೂ ಇದನ್ನು ತಿರಸ್ಕರಿಸಿದ್ದರು. ಬದಲಿಗೆ, ಅಭಿವ್ಯಕ್ತಿ ಸ್ವಾತಂತ್ರದ ಅಡಿಯಲ್ಲಿ ಸಾಮಾನ್ಯ ಜನರಿಗೆ ಯಾವುದೆಲ್ಲಾ ಜವಾಬ್ದಾರಿಯಿರುತ್ತದೆಯೋ ಅಷ್ಟೇ ಜವಾಬ್ದಾರಿ ಮತ್ತು ಕರ್ತವ್ಯ ಪತ್ರಕರ್ತರಿಗೆ ಎಂದು ಸೂಚಿಸಿದೆ. ಆದರೂ, ಮೂರು ಅಂಗಗಳ ನಡುವೆ ನಾಲ್ಕನೇ ಅಂಗ ಎಂದು ಬಿಂಬಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಲ್ಲಿ ಕೆಲಸ ನಿರ್ವಹಿಸುವವರಿಗೆ ಸಾಮಾನ್ಯ ಜನರ ತೆರಿಗೆ ಹಣದಿಂದ ವೇತನ ನೀಡಲಾಗುತ್ತದೆ. ಆದರೆ, ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಅಲ್ಲಿ ಜಾಹೀರಾತು ನೀಡುವವರ ಹಣದ ಮೇಲೆ ನಿರ್ಧಾರವಾಗುತ್ತದೆ. ಹೀಗಾಗಿ, ಮೂರು ಅಂಗಗಳ ನಡುವೆ, ನಾಲ್ಕನೇ ಅಂಗ ಎಂದು ನಿಲ್ಲಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಪತ್ರಕರ್ತನು ಕಣ್ಣು ಮುಚ್ಚಿದ್ದರೂ ದೃಶ್ಯ ಕಾಣಿಸುತ್ತಿರುತ್ತದೆ. ಕಿವಿ ಮುಚ್ಚಿದ್ದರೂ ವಿಷಯ ಕೇಳುತ್ತಿರುತ್ತದೆ. ಆದರೆ, ಅವರು ಕಂಡಿದ್ದು, ಅನಿಸಿದ್ದು, ನೋಡಿದ್ದನ್ನು ಸ್ವತಂತ್ರವಾಗಿ ಅಭಿವ್ಯಕ್ತಿಸಲು ಸಾಧ್ಯವಿಲ್ಲ. ಎಲ್ಲವೂ ಮಾಲಕರ ಹಿಡಿತದಲ್ಲಿರುತ್ತದೆ. ಈ ಸಂಕಷ್ಟವನ್ನು ಅರ್ಥ ಮಾಡಿಕೊಂಡು ಕಾರಣವೇನು ಎಂಬುದನ್ನು ಹುಡುಕಿಕೊಳ್ಳಬೇಕು ಎಂದು ದಿನೇಶ್ ಅಮೀನ್ ಮಟ್ಟು ಹೇಳಿದರು.