ರಾಷ್ಟ್ರೀಯ ಅಂತರ್ಜಲ ನೀತಿ ರೂಪಿಸಿ: ಕೃಷಿ ಸೂಕ್ಷ್ಮಜೀವಶಾಸ್ತ್ರಜ್ಞ ಡಾ.ಶ್ರೀಹರಿ ಚಂದ್ರಘಾಟ್ಗಿ
ಬೆಂಗಳೂರು, ಜು.17: ಅಂತರ್ಜಲವನ್ನು ನಿರ್ವಹಿಸುವ ಮತ್ತು ಕಲುಷಿತಗೊಳ್ಳುವುದನ್ನು ತಡೆಯುವ ಸಲುವಾಗಿ ತಕ್ಷಣ ರಾಷ್ಟ್ರೀಯ ಅಂತರ್ಜಲ ನೀತಿಯನ್ನು ರೂಪಿಸುವಂತೆ ಕೃಷಿ ಸೂಕ್ಷ್ಮಜೀವಶಾಸ್ತ್ರಜ್ಞ ಡಾ.ಶ್ರೀಹರಿ ಚಂದ್ರಘಾಟ್ಗಿ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
ಭಾರತ ಸರಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಆಯೋಜಿಸಿದ್ದ ಭಾರತೀಯ ದಿವಸ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಅಮೆರಿಕ, ಜಪಾನ್, ಚೀನಾ ಮತ್ತು ಥೈವಾನ್ ಸೇರಿದಂತೆ ಹಲವು ದೇಶಗಳು ಅಂತರ್ಜಲ ಕಲುಷಿತಗೊಳ್ಳುವುದನ್ನು ತಡೆಯಲು ಕಟ್ಟುನಿಟ್ಟಿನ ನಿಬಂಧನೆಗಳನ್ನು ಹೊಂದಿವೆ. ಆದರೆ, ಭಾರತದಲ್ಲಿ ಇಂಥಹ ನಿಬಂಧನೆಗಳಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು.
ದೇಶದಲ್ಲಿ ಗ್ರಾಮೀಣ ಪ್ರದೇಶಗಳ ಶೇ.80, ನಗರ ಪ್ರದೇಶದ ಶೇ.60ರಷ್ಟು ಮಂದಿ ಗೃಹಬಳಕೆ ಮತ್ತು ಕೃಷಿ ಉದ್ದೇಶಕ್ಕಾಗಿ ಅಂತರ್ಜಲವನ್ನು ಅವಲಂಬಿಸಿದ್ದಾರೆ. ಇದು ವಿಶ್ವದಲ್ಲೇ ಅತ್ಯಧಿಕ. ಕೃಷಿಸಾಧನಗಳಾದ ರಸಗೊಬ್ಬರ, ಕೀಟನಾಶಕಗಳು ಮತ್ತು ಕೈಗಾರಿಕಾ ರಾಸಾಯನಿಕಗಳು ದೇಶದಲ್ಲಿ ಅಂತರ್ಜಲವನ್ನು ಬಹುವಾಗಿ ಮಲಿನಗೊಳಿಸುತ್ತಿವೆ. ಇದರಿಂದ ಲಕ್ಷಾಂತರ ಮಂದಿ ಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನತೆಯ ಆರೋಗ್ಯದ ಕಾಳಜಿಗಾಗಿ ಸಾವಿರಾರು ಕೋಟಿ ರೂ. ವೆಚ್ಚ ಮಾಡುತ್ತಿದೆ. ಚಿಕಿತ್ಸೆಗಿಂತ, ರೋಗ ಬಾರದಂತೆ ತಡೆಯುವುದು ಸೂಕ್ತವಾಗಿದ್ದು, ಈ ನಿಟ್ಟಿನಲ್ಲಿ ಕಲುಷಿತ ನೀರನ್ನು ಸ್ವಚ್ಛಗೊಳಿಸುವುದು ಅಗತ್ಯ. ಸಾರ್ವಜನಿಕರಿಗೆ ಸುರಕ್ಷಿತ ನೀರನ್ನು ಒದಗಿಸುವ ನಿಟ್ಟಿನಲ್ಲಿ ಸೂಕ್ತ ಕಾರ್ಯಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ಅವರು ಸಲಹೆ ಮಾಡಿದರು.
ಶ್ರೀಹರಿ ಸಲಹೆಗಳು
-ಅಂತರ್ಜಲ ಕಲುಷಿತಗೊಳ್ಳುತ್ತಿರುವ ಬಗ್ಗೆ ತಕ್ಷಣ ಕಟ್ಟುನಿಟ್ಟಿನ ನಿರ್ಬಂಧಗಳನ್ನು ರೂಪಿಸಬೇಕು.
- ದೇಶಾದ್ಯಂತ ಬಾವಿಗಳ ಅಂತರ್ಜಲ ಕಲುಷಿತಗೊಳ್ಳುವ ಅಂಕಿ ಅಂಶಗಳನ್ನು ನಿಯಮಿತವಾಗಿ ಪಡೆಯಲು ಬಾವಿಗಳ ಮೇಲೆ ನಿಗಾ ವಹಿಸುವ ಜಾಲವನ್ನು ರೂಪಿಸಬೇಕು.
-ನಿಯಂತ್ರಣ ಪ್ರಾಧಿಕಾರಗಳಾದ ಮಾಲಿನ್ಯ ನಿಯಂತ್ರಣ ಮಂಡಳಿಗಳು ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಅಂತರ್ಜಲ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಬೇಕು.
-ಅಂತರ್ಜಲ ತೀರಾ ಕಲುಷಿತಗೊಂಡ ಪರಿಣಾಮವಾಗಿ ಗಂಭೀರ ಆರೋಗ್ಯ ಸಮಸ್ಯೆಗಳು ವರದಿಯಾದ ಪ್ರದೇಶಗಳನ್ನು ತಕ್ಷಣ ಸ್ವಚ್ಛಗೊಳಿಸಲು ಸೂಪರ್ಫಂಡ್ ನಿಗದಿಪಡಿಸಬೇಕು.
-ಮಿತ ವೆಚ್ಚದಾಯಕ ಪರಿಹಾರಾತ್ಮಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಶೋಧನಾ ಸಂಸ್ಥೆಗಳಿಗೆ ನೆರವು ನೀಡಬೇಕು.