ಮಕ್ಕಳ ನಾಪತ್ತೆ ಪ್ರಕರಣ: ಡಿಜಿಪಿಯಿಂದ ಸಮಗ್ರ ವರದಿ ಕೇಳಿದ ಹೈಕೋರ್ಟ್
ಬೆಂಗಳೂರು, ಜು.17: ರಾಜ್ಯದಲ್ಲಿ ಹೆಚ್ಚುತ್ತಿರುವ ಮಕ್ಕಳು ಕಣ್ಮರೆಯಾಗುತ್ತಿರುವ ಪ್ರಕರಣಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಹೈಕೋರ್ಟ್, 2015ರಿಂದ ಈವರೆಗೆ ರಾಜ್ಯದಲ್ಲಿ ಕಾಣೆಯಾಗಿರುವ ಮಕ್ಕಳ ಕುರಿತಂತೆ ಸಮಗ್ರ ವಿವರ ನೀಡುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದೆ.
ಮಧ್ಯಪ್ರದೇಶ ಮೂಲದ ಬಾಲಕ ರಾಮ್ ಲಖನ್ ನಾಪತ್ತೆ ಪ್ರಕರಣದ ಸಂಬಂಧ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನ್ಯಾಯಮೂರ್ತಿ ರಾಘವೇಂದ್ರ ಎಸ್ ಚವ್ಹಾಣ್ ಹಾಗೂ ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿ ವಿಚಾರಣೆಯನ್ನು ಆ.13ಕ್ಕೆ ಮುಂದೂಡಿತು.
ರಾಜ್ಯದಲ್ಲಿ ಮಕ್ಕಳ ಅಪಹರಣ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಅದನ್ನು ನಿಯಂತ್ರಿಸಲು ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನ್ಯಾಯಪೀಠ ಪ್ರಶ್ನಿಸಿದೆ, ರಾಜ್ಯದಲ್ಲಿ 2015ರಿಂದ ಈವರೆಗೂ ಎಷ್ಟು ಮಕ್ಕಳು ಕಾಣೆಯಾಗಿದ್ದಾರೆ, ಎಷ್ಟು ಪ್ರಕರಣ ದಾಖಲಾಗಿವೆ, ಅವುಗಳ ಪೈಕಿ ಎಷ್ಟು ಮಕ್ಕಳನ್ನು ಪತ್ತೆ ಹಚ್ಚಲಾಗಿದೆ ಎಂಬುದರ ಕುರಿತು ವಿವರ ಒಗಿಸಬೇಕು ಎಂದು ಸೂಚನೆ ನೀಡಿದೆ.
ಅಲ್ಲದೆ, 2017ರಲ್ಲಿ ನಾಪತ್ತೆಯಾಗಿರುವ ಬಾಲಕನನ್ನು ಹುಡುಕಲು ವಿಫಲರಾಗಿರುವ ಪೊಲೀಸರನ್ನು ತರಾಟೆ ತೆಗೆದುಕೊಂಡಿತು. ಮಂತ್ರಿಗಳ ಮಕ್ಕಳು ನಾಪತ್ತೆಯಾದರೆ 24 ಗಂಟೆಯಲ್ಲಿ ಹುಡುಕುತ್ತೀರಿ. ಕಾರ್ಮಿಕರ ಮಕ್ಕಳಿಗೆ ನಿರ್ಲಕ್ಷ ತೋರುತ್ತೀರಿ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.