ಮುಂಭಡ್ತಿಯಲ್ಲಿ ಪರಿಶಿಷ್ಟರಿಗೆ ಅನ್ಯಾಯ: ಮಾಜಿ ಕೆಪಿಸಿಸಿ ಸದಸ್ಯ ಶಂಕರ್ ಮುನವಳ್ಳಿ ಆರೋಪ
ಬೆಂಗಳೂರು, ಜು.18: ಇತ್ತೀಚಿಗೆ ಸರಕಾರ ಅನುಮೋದನೆ ನೀಡಿರುವ ಸರಕಾರಿ ನೌಕರರ ಮುಂಭಡ್ತಿಯಲ್ಲಿ ಎಸ್ಸಿ-ಎಸ್ಟಿ ಸಮುದಾಯಗಳಿಗೆ ಅನ್ಯಾಯ ಎಸಗಲಾಗಿದೆ ಎಂದು ಮಾಜಿ ಕೆಪಿಸಿಸಿ ಸದಸ್ಯ ಶಂಕರ್ ಮುನವಳ್ಳಿ ಆರೋಪಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ಸಮ್ಮಿಶ್ರ ಸರಕಾರದಲ್ಲಿ 600 ಕ್ಕೂ ಅಧಿಕ ಸರಕಾರಿ ನೌಕರರಿಗೆ ಮುಂಭಡ್ತಿ ನೀಡಲಾಗಿದ್ದು, ಅದರಲ್ಲಿ ಬಹುಸಂಖ್ಯಾತರಾದ ದಲಿತರಿಗೆ ತೀವ್ರ ಅನ್ಯಾಯ ಮಾಡಲಾಗಿದೆ. ಕೆಲವೇ ಸಮುದಾಯದವರಿಗೆ ಮುಂಭಡ್ತಿ ನೀಡಲಾಗಿದೆ. ಹೀಗಾಗಿ, ಕೂಡಲೇ ಸರಕಾರ ಇದನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಹಿಂದಿನ ಸರಕಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶಿಷ್ಟರ ಭಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧವಾಗಿ ಭಡ್ತಿ ಮೀಸಲಾತಿ ಸಂರಕ್ಷಣೆ ಕಾಯ್ದೆ ಮಾಡಿದ್ದು, ರಾಷ್ಟ್ರಪತಿಯೂ ಅದಕ್ಕೆ ಸಹಿ ಹಾಕಿದ್ದಾರೆ. ಆದರೆ, ಅದನ್ನು ಇಂದಿನ ನಮ್ಮ ಸರಕಾರ ಜಾರಿ ಮಾಡಲು ಮುಂದಾಗುತ್ತಿಲ್ಲ. ಬದಲಿಗೆ ಆ ಕಾಯ್ದೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಶಿಷ್ಟ ಜಾತಿಯಲ್ಲಿ 101 ಹಾಗೂ ಪಂಗಡದಲ್ಲಿ 56 ಜಾತಿಗಳಿದ್ದು, ರಾಜ್ಯ ಸರಕಾರ ಈ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದೆ. ದಲಿತರನ್ನು ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದೆ. ಹೀಗಾಗಿ, ಕೂಡಲೇ ಸರಕಾರ ನಮ್ಮ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡಲು ಮುಂದಾಗಬೇಕು. ಇಲ್ಲದಿದ್ದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಮತ ಹಾಕದಂತೆ ಸಮುದಾಯದಲ್ಲಿ ಜಾಗೃತಿ ಮೂಡಿಸಲಾುತ್ತದೆ ಎಂದು ಎಚ್ಚರಿಕೆ ನೀಡಿದರು.