ಬೆಂಗಳೂರು: ವ್ಯಕ್ತಿಯ ಬೆದರಿಸಿ 50 ಲಕ್ಷ ರೂ. ನಗದು ದರೋಡೆ
ಬೆಂಗಳೂರು, ಜು.18: ವ್ಯಕ್ತಿಯೊಬ್ಬರನ್ನು ಬೆದರಿಸಿದ ದುಷ್ಕರ್ಮಿಗಳ ತಂಡ, ಬರೋಬ್ಬರಿ 50 ಲಕ್ಷ ರೂ. ದರೋಡೆ ಮಾಡಿರುವ ಘಟನೆ ಇಲ್ಲಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಅನ್ನಪೂರ್ಣೇಶ್ವರಿ ನಗರದ ಹೆಲ್ತ್ ಲೇಔಟ್ನಲ್ಲಿ ರಾಮುಗೌಡ ಎಂಬುವವರಿಂದ 50 ಲಕ್ಷ ಹಣ ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣದ ವಿವರ: ರಾಮುಗೌಡ, ನಗರದ ರಾಮೋಹಳ್ಳಿಯಲ್ಲಿ ರೆಸಾರ್ಟ್ ಖರೀದಿಸುವುದಕ್ಕೆಂದು ಬ್ಯಾಂಕ್ನಿಂದ ಜು.16ರ ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ಕಾಮಾಕ್ಷಿಪಾಳ್ಯದ ಬ್ಯಾಂಕಿನಿಂದ 50 ಲಕ್ಷ ಹಣ ತೆಗೆದಿದ್ದರು. ಬಳಿಕ ಹಣವನ್ನು ಶ್ರೀಗಂಧದ ಕಾವಲಿನ, ಹೆಲ್ತ್ ಲೇಔಟ್ನಲ್ಲಿ ಸಂಬಂಧಿಯ ಮನೆಯಲ್ಲಿಟ್ಟಿದ್ದರು. ಮಾರನೆ ದಿನ, ಜು.17 ಬೆಳಗ್ಗೆ 9 ಗಂಟೆಯ ಸುಮಾರಿಗೆ ರೆಸಾರ್ಟ್ ಖರೀದಿಯ ಮಾತುಕತೆ ಶುರುವಾಗಿತ್ತು. ಮಾತುಕತೆಗೆಂದು ರಾಮುಗೌಡ, ಖರೀದಿ ಮಾಡಲು ಇಚ್ಛಿಸಿರುವ ಸ್ಥಳದ ಮಾಲಕ ದೇವೆಂದ್ರಪ್ಪ ಹಾಗೂ ಅವರ ಪರಿಚಯಸ್ಥರು ವಾಹನ ನಿಲುಗಡೆ ಜಾಗಲ್ಲಿ ಕುಳಿತು ಮಾತನಾಡುತ್ತಿದ್ದರು.
ಈ ವೇಳೆ ಅಲ್ಲಿಗೆ ಬಂದ ಐದಾರು ಮಂದಿ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಬೆದರಿಸಿ 50 ಲಕ್ಷ ನಗದು ಕಸಿದು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣಾ ಪೊಲೀಸರು ತನಿಖೆಗೊಂಡಿದ್ದಾರೆ.