ಪಠ್ಯೇತರ ಪುಸ್ತಕಗಳ ಓದು ಬರಹಗಾರನನ್ನಾಗಿಸಿತು: ಲೇಖಕ ಯೋಗೇಶ್ ಮಾಸ್ಟರ್
ಬೆಂಗಳೂರು, ಜು.18: ಬಾಲ್ಯದಲ್ಲಿಯೆ ಪಠ್ಯೇತರ ಪುಸ್ತಕಗಳ ಓದು ಬರಹಗಾರನಾಗಿ ರೂಪಗೊಳ್ಳಲು ಸಾಧ್ಯವಾಯಿತು ಎಂದು ಲೇಖಕ ಯೋಗೇಶ್ ಮಾಸ್ಟರ್ ತಮ್ಮ ಓದಿನ ಅನುಭವವನ್ನು ಹಂಚಿಕೊಂಡರು.
ಬುಧವಾರ ಕನ್ನಡ ಪುಸ್ತಕ ಪ್ರಾಧಿಕಾರ ನಗರದ ಅಲ್ಲಮ ಕಲಾಶಾಲೆ ಆವರಣದಲ್ಲಿ ಆಯೋಜಿಸಿದ್ದ ಅಚ್ಚುಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಹಾಗೂ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಶಾಲಾ ದಿನಗಳಲ್ಲಿಯೆ ಮಂಕುತಿಮ್ಮನ ಕಗ್ಗ, ಶರಣರ ವಚನಗಳು ಸೇರಿದಂತೆ ಹಲವು ಪಠ್ಯೇತರ ಪುಸ್ತಕಗಳನ್ನು ಓದಲು ಪ್ರಾರಂಭಿಸಿದ್ದೆ. ಈ ಓದಿನ ಫಲವಾಗಿ 7ನೆ ತರಗತಿಯಲ್ಲಿಯೆ ಕವನಗಳನ್ನು ಬರೆದೆ. 10ನೆ ತರಗತಿಯ ವೇಳೆಗೆ ಕವನ ಸಂಕಲನವನ್ನು ಬಿಡುಗಡೆ ಮಾಡಲು ಸಾಧ್ಯವಾಯಿತು ಎಂದು ಅವರು ತಿಳಿಸಿದರು.
ಶಿಕ್ಷಕರು ಹಾಗೂ ಪೋಷಕರು ತಮ್ಮ ಶಾಲೆ ಹಾಗೂ ಮನೆಗಳಲ್ಲಿ ಓದುವಂತಹ ವಾತಾವರಣವನ್ನು ನಿರ್ಮಿಸಬೇಕು. ಮೊದಲಿಗೆ ಮಕ್ಕಳಿಗೆ ತಪ್ಪಿಲ್ಲದೆ ಓದುವುದು ಹಾಗೂ ಬರೆಯುವುದನ್ನು ಕಲಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಮೂಡುವಂತೆ ಮಾಡಬೇಕು. ನಂತರ ಪುಸ್ತಕಗಳು ಮಕ್ಕಳಲ್ಲಿ ಕೈಗೆ ಸಿಗುವಂತಾದರೆ ತಾವಾಗಿಯೆ ಓದಲು ಉತ್ಸುಕರಾಗುತ್ತಾರೆ ಎಂದು ಅವರು ಅಭಿಪ್ರಾಯಿಸಿದರು.
ಪೋಷಕರು ಹಾಗೂ ಶಿಕ್ಷಕರು ಮಕ್ಕಳಿಗೆ ಆದರ್ಶಗಳ ಬೋಧನೆಗಿಂತ ಹಾಗೆ ನಡೆದುಕೊಳ್ಳಬೇಕು. ಇದು ಮಕ್ಕಳ ಮೇಲೆ ಪ್ರಭಾವಬೀರುತ್ತದೆ. ಪೋಷಕರು ಮತ್ತು ಶಿಕ್ಷಕರು ಕಲಿಕೆಯಲ್ಲಿ ನಿರತರಾಗಿದ್ದಾಗ ಮಾತ್ರ ಮಕ್ಕಳು ತಮ್ಮ ಹಾದಿಯಲ್ಲಿ ಬರುತ್ತಾರೆ ಎಂದು ಅವರು ತಿಳಿಸಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ ಮಾತನಾಡಿ, ಶಾಲೆಗಳಲ್ಲಿ ಪುಸ್ತಕಗಳ ಕುರಿತು ಆಸಕ್ತಿ ಹಾಗೂ ಪ್ರೀತಿ ಮೂಡಿಸುವಂತಹ ವಾತಾವರಣ ಮೂಡಿಸುವಂತಹ ಕೆಲಸವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಸರಕಾರಿ ಶಾಲೆಯಲ್ಲಿ ಪುಸ್ತಕ ಓದಿನ ಅಭಿರುಚಿ ಹೆಚ್ಚಿಸುವಂತಹ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ ಎಂದು ಆಶಿಸಿದರು.
ಶಾಲೆಯ ವಿದ್ಯಾರ್ಥಿಗಳು ತಾವು ಓದಿದ ಪುಸ್ತಕಗಳ ಕುರಿತು ಮಾತನಾಡಿದರು. ಈ ವೇಳೆ ರಂಗಕರ್ಮಿ ಕೆ.ವಿ.ನಾಗರಾಜು, ಶಾಲೆಯ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು.