ಕ್ಯಾಬ್ಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಕಿರುಕುಳ ವಿಚಾರ: ಅರ್ಜಿ ವಿಚಾರಣೆ ಆ.8 ಕ್ಕೆ ಮುಂದೂಡಿದ ಹೈಕೋರ್ಟ್
ಬೆಂಗಳೂರು, ಜು.20: ನಗರದಲ್ಲಿ ಸಂಚರಿಸುವ ಓಲಾ ಹಾಗೂ ಉಬರ್ ಸೇರಿ ಆ್ಯಪ್ ಆಧಾರಿತ ಕ್ಯಾಬ್ಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಕಿರುಕುಳ ನೀಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸರಕಾರಕ್ಕೆ ಆದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಆ.8ಕ್ಕೆ ಮುಂದೂಡಿದ್ದು, ಈ ಅರ್ಜಿಯೊಂದಿಗೆ ಕ್ಯಾಬ್ಗಳಲ್ಲಿ ಚೈಲ್ಡ್ ಸೇಪ್ಟಿ ಲಾಕ್ ಸಿಸ್ಟಮ್ ನಿಷ್ಕ್ರಿಯಗೊಳಿಸಲು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನೂ ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ತಿಳಿಸಿದೆ.
ಪ್ರಯಾಣಿಕರಿಗೆ ಕಿರುಕುಳ ನೀಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೋರಿ ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ವಿಚಾರಣೆ ಶುಕ್ರವಾರ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ವಿಚಾರಣೆಗೆ ಬಂದಿತ್ತು.
ನ್ಯಾಯಪೀಠವು ಆ.8ರಂದು ಓಲಾ ಹಾಗೂ ಉಬರ್ ಸೇರಿ ಆ್ಯಪ್ ಆಧಾರಿತ ಕ್ಯಾಬ್ಗಳ ಅರ್ಜಿ ವಿಚಾರಣೆಯೊಂದಿಗೆ ಕ್ಯಾಬ್ಗಳಲ್ಲಿ ಚೈಲ್ಡ್ ಸೇಫ್ಟಿ ಲಾಕ್ ಸಿಸ್ಟಮ್ ನಿಷ್ಕ್ರಿಯಗೊಳಿಸಲು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನೂ ವಿಚಾರಣೆ ನಡೆಸುವುದಾಗಿ ತಿಳಿಸಿತು.