ಅಗರಬತ್ತಿ ಉದ್ಯಮದಿಂದ 20 ಲಕ್ಷ ಉದ್ಯೋಗ ಲಭ್ಯ: ಶರತ್ ಬಾಬು
ಬೆಂಗಳೂರು, ಜು.23: ಭಾರತದಲ್ಲಿ ಅಗರಬತ್ತಿ ಉದ್ಯಮವು 20 ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡಿದ್ದು, ಅದರಲ್ಲಿ ಶೇ.80 ರಷ್ಟು ಮಹಿಳೆಯರಿದ್ದಾರೆ ಎಂದು ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಘದ ಮುಖಂಡ ಶರತ್ ಬಾಬು ಹೇಳಿದ್ದಾರೆ.
ಅಗರಬತ್ತಿ ಉದ್ಯಮವು ಆರಂಭದಿಂದ ಇದುವರೆಗೆ ಹಲವು ಪಟ್ಟು ಬೆಳೆದಿದ್ದು, ಆಕರ್ಷಕ ಗುಡಿ ಕೈಗಾರಿಕೆಯಾಗಿ ಹೊರಹೊಮ್ಮುತ್ತಿದೆ. ದೇಶದಲ್ಲಿ 20 ಲಕ್ಷಕ್ಕೂ ಅಧಿಕ ಜನರು ಈ ಉದ್ಯಮದಿಂದ ಜೀವನ ನಿರ್ವಹಣೆ ಮಾಡುತ್ತಿದ್ದು, ಅದರಲ್ಲಿ ಶೇ.50 ರಷ್ಟು ಜನರು ಕರ್ನಾಟಕದಲ್ಲಿದ್ದಾರೆ. ಮಹಿಳಾ ಸಂಘಟನೆಗಳು ಅಗರಬತ್ತಿ ಉತ್ಪಾದನೆ ಮತ್ತು ಪ್ಯಾಕಿಂಗ್ನಲ್ಲಿ ತೊಡಗಿಸಿಕೊಂಡಿದ್ದು, ಅವರ ಆರ್ಥಿಕ ದೃಢತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಹಕಾರಿಯಾಗಿದೆ.
ಮುಂದಿನ ಒಂದು ತಿಂಗಳಲ್ಲಿ ಭಾರತದ ಹಬ್ಬಗಳ ಋತು ಆರಂಭವಾಗುತ್ತಿದ್ದು, ಈ ವಲಯಕ್ಕೆ ಬೇಡಿಕೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಇದನ್ನು ಪೂರೈಸುವ ಸಲುವಾಗಿ ಎಐಎಎಂಎ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಮಹಿಳೆಯರನ್ನು ಅಗರಬತ್ತಿ ತಯಾರಿಸುವ ಕಾರ್ಯದಲ್ಲಿ ತರಬೇತುಗೊಳಿಸಲು ಮುಂದಾಗಿದ್ದು, ಆಸಕ್ತರಿಗೆ ತರಬೇತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಅಗರಬತ್ತಿ ಉದ್ಯಮವು ಶ್ರಮಸಾಂದ್ರ ಉದ್ಯಮವಾಗಿದ್ದು, ಪ್ರತಿ ಅಗರಬತ್ತಿಯನ್ನೂ ಕರಕುಶಲತೆಯಿಂದ ಸಿದ್ಧಪಡಿಸಲಾಗುತ್ತದೆ. ಕರ್ನಾಟಕದಲ್ಲಿ ಅಗರಬತ್ತಿ ಉದ್ಯಮವು ಅಗರಬತ್ತಿ ಸುತ್ತುವುದು, ಪ್ಯಾಕ್ ಮಾಡುವುದು ಹಾಗೂ ಬಿದಿರಿನ ಕಡ್ಡಿಗಳನ್ನು ಸಿದ್ಧಪಡಿಸುವುದು ಮತ್ತಿತರ ವಲಯಗಳಲ್ಲಿ 10 ಲಕ್ಷಕ್ಕೂ ಅಧಿಕ ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ಈ ಉದ್ಯಮವು ಸುಧೀರ್ಘ ಕಾಲದಿಂದಲೂ ಈ ಸಂಪನ್ಮೂಲಗಳಿಂದ ಲಾಭ ಪಡೆಯುತ್ತಿದೆ. ಕಳೆದ ಕೆಲ ವರ್ಷಗಳಲ್ಲಿ, ಅಗರಬತ್ತಿ ಉತ್ಪಾದನೆ ಚಟುವಟಿಕೆ ಗಣನೀಯವಾಗಿ ಹೆಚ್ಚಿದ್ದು, ಅಗರಬತ್ತಿ ತಯಾರಿಕಾ ತರಬೇತಿ ಚಟುವಟಿಕೆ ಕೂಡಾ ಹೆಚ್ಚಿರುವುದರಿಂದ ಆರ್ಥಿಕ ಸ್ವಾವಲಂಬನೆ ಮತ್ತು ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗಿದೆ. ಅದರಲ್ಲೂ ಮುಖ್ಯವಾಗಿ ಆರ್ಥಿಕ ಸ್ವಾತಂತ್ರ ಬಯಸುವ ಮಹಿಳೆಯರ ಪಾಲಿಗೆ ಈ ಉದ್ಯಮ ವರದಾನವಾಗಿದೆ ಎಂದು ಅವರು ಪ್ರಕಟನೆಯಲ್ಲಿ ಹೇಳಿದ್ದಾರೆ.