ಅಪ್ರಾಪ್ತೆಯ ಅಪಹರಿಸಿ ಸಾಮೂಹಿಕ ಅತ್ಯಾಚಾರ: ಮೂವರ ಬಂಧನ
ಬೆಂಗಳೂರು, ಜು.28: ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಇಲ್ಲಿನ ಹೆಬ್ಬಾಳ ಠಾಣಾ ಪೊಲೀಸರು ಮೂವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂತೋಷ್, ಆಕಾಶ್ ಹಾಗೂ ಜೋಸೆಫ್ ಎಂಬವರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಪ್ರಕರಣದ ವಿವರ: ಆರೋಪಿ ಜೋಸೆಫ್ ಜು.22 ರಂದು ಹೆಬ್ಬಾಳದ ಪಾರ್ಕ್ವೊಂದರ ಸಮೀಪ ಬಾಲಕಿಯನ್ನು ಅಪಹರಿಸಿದ ನಂತರ ತನ್ನ ಸ್ನೇಹಿತರಾದ ಸಂತೋಷ್ ಹಾಗೂ ಆಕಾಶ್ನನ್ನು ಕರೆಸಿ, ಮೂರು ದಿನಗಳ ಕಾಲ ಅಪ್ರಾಪ್ತೆಯನ್ನು ಕಾರಿನಲ್ಲಿ ಸುತ್ತಾಡಿಸಿದ್ದರು. ಅಲ್ಲದೇ ಚಾಕು ತೋರಿಸಿ ಬಲವಂತವಾಗಿ ಮೂರು ದಿನಗಳ ಕಾಲ ದೊಡ್ಡಬಳ್ಳಾಪುರ ಹತ್ತಿರದ ಸೀಬೆಹಣ್ಣಿನ ತೋಟದಲ್ಲಿ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದ್ದು, ನಂತರ ಜು.23 ರಂದು ಬಾಲಕಿ ನಾಪತ್ತೆ ಆಗಿದ್ದಾಳೆಂದು ಹೆಬ್ಬಾಳದಲ್ಲಿ ದೂರು ದಾಖಲಾಗಿತ್ತು.
ಮೂರು ದಿನಗಳ ಬಳಿಕ ಆರೋಪಿಗಳು ಬಾಲಕಿಗೆ ವಿಷಯ ಯಾರಿಗೂ ಹೇಳಬಾರದು ಎಂದು ಬೆದರಿಸಿ, ಅಪಹರಣ ಮಾಡಿದ್ದ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದರು. ಮನೆಯವರು ಅಪ್ರಾಪ್ತೆಯ ಚಲನವಲನ ನೋಡಿ ಅನುಮಾನಗೊಂಡು ವಿಚಾರಣೆ ಮಾಡಿದ್ದರು. ಈ ವೇಳೆ ಬಾಲಕಿ ಅತ್ಯಾಚಾರವಾಗಿರುವ ಬಗ್ಗೆ ಮನೆಯವರಿಗೆ ತಿಳಿಸಿದ್ದು, ಈ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.