ಪ್ರಧಾನಿ ಮೋದಿ ಯೋಜನೆ ಹೆಸರಲ್ಲಿ ವೃದ್ಧ ದಂಪತಿಗೆ ವಂಚನೆ
ಬೆಂಗಳೂರು, ಆ.1: ಪ್ರಧಾನಿ ನರೇಂದ್ರ ಮೋದಿ ಯೋಜನೆ ಹೆಸರಿನಲ್ಲಿ ವೃದ್ಧ ದಂಪತಿಗಳಿಗೆ ವಂಚನೆ ಮಾಡಿರುವ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಿಜಯನಗರ ಹೊಸಹಳ್ಳಿ ನಿವಾಸಿ ನಾಗೇಶ್ವರ್ ದಂಪತಿಗೆ ಪ್ರಧಾನ ಮಂತ್ರಿ ಯೋಜನೆದಡಿ ಉಚಿತವಾಗಿ ವಿದ್ಯುತ್ ಬಲ್ಬ್ ನೀಡುವುದಾಗಿ ಹಣ ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಿರಿಯ ಜೀವಗಳಿಗೆ ಮೋದಿ ಸರಕಾರ ಉಚಿತವಾಗಿ ಬಲ್ಬ್ ವಿತರಿಸುತ್ತಿದೆ. ಆ ಯೋಜನೆ ಅಡಿಯಲ್ಲಿ ಉಚಿತವಾಗಿ ಬಲ್ಬ್ ಕೊಡುವುದಾಗಿ ಹೇಳಿದ್ದಾರೆ. ನಂತರ 10 ಸಾವಿರ ಹಣ ಕೊಡಿ, ಸ್ಕ್ಯಾನ್ ಮಾಡಿ ನಿಮಗೇ ವಾಪಸ್ ಕೊಡುತ್ತೇವೆ ಎಂದು ನಂಬಿಸಿ ವೃದ್ಧ ದಂಪತಿಯಿಂದ ನಗದು ಸ್ವೀಕರಿಸಿದ್ದಾರೆ ಎನ್ನಲಾಗಿದೆ.
ಬಳಿಕ ನಿಮ್ಮ ಆಧಾರ್ ಕಾರ್ಡ್ ಕೊಡಿ ಅದನ್ನೂ ಸ್ಕಾನ್ ಮಾಡಿಕೊಡುತ್ತೇವೆ ಎಂದಿದ್ದಾರೆ. ಬಳಿಕ ವೃದ್ದ ದಂಪತಿ ಆಧಾರ್ ಕಾರ್ಡ್ ತರಲು ಒಳಗೆ ಹೋದ ತಕ್ಷಣ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ಘಟನೆ ಮನೆ ಬಳಿಯಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ನಾಗೇಶ್ವರ್ ತಿಳಿಸಿದ್ದಾರೆ.
ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.