ಫ್ಲೆಕ್ಸ್ ತೆರವುಗೊಳಿಸಲು ಸಹಕರಿಸಿ: ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿ
ಬೆಂಗಳೂರು, ಆ. 5 ಹೈಕೋರ್ಟ್ ಸೂಚನೆಯಂತೆ ಬೆಂಗಳೂರು ನಗರದಲ್ಲಿ ಫ್ಲೆಕ್ಸ್ ತೆರವು ಕಾರ್ಯಾಚರಣೆಗೆ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಜಕೀಯ ಪಕ್ಷಗಳ ಮುಖಂಡರನ್ನು ಮನವಿ ಮಾಡಿದ್ದಾರೆ.
ಫ್ಲೆಕ್ಸ್ನಿಂದ ನಗರದ ಸೌಂದರ್ಯ ಹಾಳಾಗಿರುವುದಲ್ಲದೆ, ಪರಿಸರ ಮಾಲಿನ್ಯವೂ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟಿನ ಸೂಚನೆಯನ್ನು ಪಾಲಿಸಿ, ಫ್ಲೆಕ್ಸ್ಗಳನ್ನು ತೆರವುಗೊಳಿಸಲು ಎಲ್ಲ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಸಹಕರಿಸಬೇಕು ಎಂದು ಅವರು ಕೋರಿದ್ದಾರೆ.
ಅಲ್ಲದೆ, ಮುಂದಿನ ದಿನಗಳಲ್ಲಿ ನಗರವನ್ನು ಫ್ಲೆಕ್ಸ್ ಮುಕ್ತ ನಗರವನ್ನಾಗಿಸಿ, ನಗರದ ಹಳೆಯ ಸೌಂದರ್ಯ ಮರುಕಳಿಸುವಂತೆ ಮಾಡೋಣ ಎಂದು ಕರೆ ನೀಡಿರುವ ಅವರು, ಫ್ಲೆಕ್ಸ್ ತೆರವುಗೊಳಿಸುವ ಬಗ್ಗೆ ಹೈಕೋರ್ಟಿನ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿರುವ ಸಿಎಂ ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಪ್ರಕಟಣೆಯಲ್ಲಿ ನಿರ್ದೇಶಿಸಿದ್ದಾರೆ.
Next Story