ಭೂ ಮಾಲಕತ್ವ ಖಾತ್ರಿ ಯೋಜನೆ ಜಾರಿ: ಕಂದಾಯ ಸಚಿವ ದೇಶಪಾಂಡೆ
ಹಳಿಯಾಳ, ಹಾಸನ, ಕೊರಟಗೆರೆ ತಾಲೂಕುಗಳು ಆಯ್ಕೆ
ಬೆಂಗಳೂರು, ಆ.17: ಭೂಮಾಲಕತ್ವವನ್ನು ಅನುಮಾನಕ್ಕೆ ಎಡೆ ಇಲ್ಲದಂತೆ ಖಾತ್ರಿಪಡಿಸುವ ‘ಭೂಮಾಲಕತ್ವ ಖಾತ್ರಿ ಯೋಜನೆ(ಲ್ಯಾಂಡ್ ಟೈಟ್ಲಿಂಗ್)ಯನ್ನು ರಾಜ್ಯದ 3 ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಈ ಯೋಜನೆ ಅನ್ವಯ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಹಾಸನ ಜಿಲ್ಲೆಯ ಹಾಸನ ಮತ್ತು ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಭೂಮಾಲಕತ್ವ ಖಾತ್ರಿ ಯೋಜನೆಯನ್ವಯ ಸರ್ವೆ ಮತ್ತು ಕಂದಾಯ ಇಲಾಖೆಯ ದಾಖಲೆಗಳನ್ನು ಹೋಲಿಸಿ, ಪರಿಶೀಲಿಸಲಾಗುವುದು. ಬಳಿಕ ಆರ್ಟಿಸಿಯನ್ನು ಅಪ್ಡೇಟ್ ಮಾಡಿ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸದಂತೆ ಕಾನೂನಿನ ಬೆಂಬಲವನ್ನು ನೀಡಲಾಗುವುದು ಎಂದು ದೇಶಪಾಂಡೆ ವಿವರಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣೆಗೂ ಮುನ್ನ ಮಂಡಿಸಿದ 2018-19ನೆ ಸಾಲಿನ ಆಯವ್ಯಯದಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುವುದು ಎಂದು ಘೋಷಿಸಿದ್ದರು. ಆ ಆಯೋಜನೆಯನ್ನು ಇದೀಗ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.