ದೇಶಕ್ಕಾಗಿ ಸೇವೆ ಮಾಡಿದ ನಿಜವಾದ ರಾಜಕಾರಣಿ ವಾಜಪೇಯಿ: ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ
ಬೆಂಗಳೂರು, ಆ.17: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮೃದು ಸ್ವಭಾವದ ವ್ಯಕ್ತಿಯಾಗಿದ್ದು, ಎಂದೂ ಕೋಪ ಮಾಡಿಕೊಂಡ ವ್ಯಕ್ತಿಯಲ್ಲ. ನಿಜವಾದ ದೇಶ ಸೇವೆಗಾಗಿ ಸೇವೆ ಮಾಡಿದ ರಾಜಕಾರಣಿಯಾಗಿದ್ದಾರೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಶುಕ್ರವಾರ ನಗರದ ಪ್ರೆಸ್ಕ್ಲಬ್ನಲ್ಲಿ ರಾಷ್ಟ್ರೀಯ ಚಾಲಕರ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ವಾಜಪೇಯಿ ನಿಧನಕ್ಕೆ ಶ್ರದ್ಧಾಂಜಲಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತದ ಪ್ರಧಾನಿಗಳಲ್ಲಿ ವಾಜಪೇಯಿಯನ್ನು ಮೀರಿದ ಮತ್ತೊಬ್ಬ ಪ್ರಧಾನಿ ಯಾರೂ ಇಲ್ಲ. ಇಂತಹ ವ್ಯಕ್ತಿಗಳು ರಾಜಕೀಯದಲ್ಲಿ ಇರಬೇಕು ಎಂದು ಆಶಿಸಿದರು.
ಇಂದಿರಾಗಾಂಧಿ ಸರಕಾರದಲ್ಲಿ ಘೋಷಣೆ ಮಾಡಿದ್ದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅವರ ಪರ ವಕಾಲತ್ತು ವಹಿಸಿಕೊಂಡಿದ್ದೆ. ಆ ಸಂದರ್ಭದಲ್ಲಿ ಪಾರ್ಲಿಮೆಂಟ್ ಸದಸ್ಯರನ್ನು ಭೇಟಿಯಾಗಲು ನ್ಯಾಯಾಲಯ ಅನುಮತಿ ನೀಡಿದ್ದ ವೇಳೆಯಲ್ಲಿ ವಾಜಪೇಯಿಯನ್ನು ಭೇಟಿ ಮಾಡಿದ್ದೆ. ಅಲ್ಲಿ ಅವರು ಹೆಚ್ಚು ಮಾತನಾಡುತ್ತಿರಲಿಲ್ಲ. ಆದರೆ, ಗಂಭೀರವಾಗಿ ವಿಚಾರ ವಿನಿಮಯ ಮಾಡುತ್ತಿದ್ದರು ಎಂದು ನೆನಪಿಸಿಕೊಂಡರು.
ವಾಜಪೇಯಿ ಹಾಗೂ ಅಡ್ವಾಣಿ ಬೆಂಗಳೂರಿಗೆ ಭೇಟಿ ನೀಡಿದ್ದ ವೇಳೆ ಕರ್ನಾಟಕ ಸರಕಾರ ಅವರನ್ನು ಬಂಧಿಸಿತ್ತು. ಅನಂತರ ಅವರನ್ನು ಬಿಡುಗಡೆ ಮಾಡಬೇಕು ಎಂಬ ಒತ್ತಡದ ನಂತರ ಬಿಡುಗಡೆಗೊಳಿಸಿದ ಕೂಡಲೇ ಕೇಂದ್ರ ಸರಕಾರ ಮೋಸ ಮಾಡಿ ಬಂಧಿಸಿ, ಬೆಂಗಳೂರಿನಿಂದ ದೂರದ ಜೈಲಿಗೆ ಕಳಿಸಿದರು. ಇದನ್ನು ಪ್ರಶ್ನಿಸಿ ನಾನು ಪತ್ರ ಬರೆದಿದ್ದೆ. ಅನಂತರ ಎರಡು ದಿನಗಳಲ್ಲಿ ಬೆಂಗಳೂರಿಗೆ ವರ್ಗಾವಣೆ ಮಾಡಿದ್ದರು ಎಂದರು.
ತುರ್ತು ಪರಿಸ್ಥಿತಿ ಹಿಂಪಡೆದ ನಂತರ ನಡೆದ ಸಂಸತ್ ಚುನಾವಣೆಯಲ್ಲಿ ನನ್ನ ತಂದೆಯನ್ನು ಚುನಾವಣೆಯಲ್ಲಿ ನಿಲ್ಲುವಂತೆ ವಾಜಪೇಯಿ ಸಲಹೆ ನೀಡಿದ್ದರು. ಅಲ್ಲದೆ, ಅಡ್ವಾಣಿ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದರು. ಹೀಗಾಗಿ, ಅಂದು ತಮ್ಮ ತಂದೆ ಬಿಜೆಪಿಯಿಂದ ಚುನಾವಣೆಗೆ ನಿಂತು ಗೆದ್ದಿದ್ದರು. ಇದಾದ ಬಳಿಕ ಹಲವು ಬಾರಿ ಅವರನ್ನು ಭೇಟಿ ಮಾಡಿದ್ದೆ ಎಂದು ಅವರು ಹೇಳಿದರು.
ಎಐಸಿಸಿ ಮಾಧ್ಯಮ ವಕ್ತಾರ ರಾಧಾಕೃಷ್ಣ ಮಾತನಾಡಿ, ಆಡಳಿತಗಾರನಿಗೆ ಇರಬೇಕಾದ ಗುಣ ವಾಜಪೇಯಿಯಲ್ಲಿತ್ತು. ತಮ್ಮ ಸಿದ್ಧಾಂತದ ಚೌಕಟ್ಟುಗಳನ್ನು ಮೀರದೆ, ಪಾರ್ಲಿಮೆಂಟ್ ನಡವಳಿಕೆಯನ್ನು ಎತ್ತಿಹಿಡಿದ ನಾಯಕನಾಗಿದ್ದರು. ಮಾತು ಮತ್ತು ಮೌನದ ಮೂಲಕ ಸಂವಾದ ಮಾಡುತ್ತಿದ್ದ ಅವರು, ಮೌನದ ಮೂಲಕವೇ ಸಂದೇಶ ನೀಡುತ್ತಿದ್ದರು ಎಂದರು.
ಇಂದಿನ ಭಾರತೀಯ ಜನತಾ ಪಕ್ಷ ಹಲವಾರು ವಿಧಾನಗಳಲ್ಲಿ ಬದಲಾಗಿದೆ. ವಾಜಪೇಯಿಯಂತಹ ಆದರ್ಶಗಳು ಯಾರಲ್ಲಿಯೂ ಕಾಣುತ್ತಿಲ್ಲ. ವಾಜಪೇಯಿ ನಾನು ಎಂಬ ಪದ ಬಳಕೆ ಮಾಡಿದವರಲ್ಲ, ನಾವು ಎನ್ನುತ್ತಿದ್ದರು. ಅಂತಹ ನಾಯಕರು ಇಂದು ಹುಡುಕಲು ಸಾಧ್ಯವಿಲ್ಲ ಎಂದು ಹೇಳಿದರು. ಸಭೆಯಲ್ಲಿ ಮಾಜಿ ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಮಾಜಿ ಸಚಿವ ರಾಮಚಂದ್ರಗೌಡ, ರಾಷ್ಟ್ರೀಯ ಚಾಲಕರ ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಉಪಸ್ಥಿತರಿದ್ದರು.