ಸಾಲಬಾಧೆ: ಕತ್ತು ಕುಯ್ದು ರೈತ ಆತ್ಮಹತ್ಯೆ
ಬೆಂಗಳೂರು, ಸೆ.2: ಕೃಷಿಗಾಗಿ ಕೈಸಾಲ ಮಾಡಿಕೊಂಡಿದ್ದ ರೈತನೋರ್ವ ಸಾಲಬಾಧೆಯಿಂದ ಮಾನಸಿಕವಾಗಿ ಬೇಸತ್ತು ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಇಲ್ಲಿನ ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.
ನಾರನಹಳ್ಳಿಯ ರೈತ ರಘು(38) ಆತ್ಮಹತ್ಯೆಗೆ ಶರಣಾದವರು ಎಂದು ತಿಳಿದುಬಂದಿದೆ.
ಕೃಷಿ ಚಟುವಟಿಕೆಗಳಿಗಾಗಿ ಸುಮಾರು 3 ಲಕ್ಷ ರೂ. ಕೈಸಾಲ ಮಾಡಿದ್ದು, ಸಾಲಗಾರರು ತಾವು ಕೊಟ್ಟಿದ್ದ ಹಣ ವಾಪಾಸ್ ಕೊಡುವಂತೆ ಒತ್ತಡ ಹೇರುತ್ತಿದ್ದರು. ಮನೆ ಬಳಿಗೆ ಬರುತ್ತಿದ್ದ ಸಾಲ ವಸೂಲಿಗಾರರು ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತಿದ್ದ ರಘು ರವಿವಾರ ಬೆಳಗಿನ ಜಾವ ಮನೆಯಲ್ಲಿಯೇ ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ರಕ್ತ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಕಂಡು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ದೊಡ್ಡಬೆಳವಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.