ಪೊಲೀಸ್ ವಸತಿ ಶಾಲೆಗೆ ಅನುದಾನ ನೀಡಲು ಸಿದ್ಧ: ಡಾ.ಜಿ.ಪರಮೇಶ್ವರ್
ಬೆಂಗಳೂರು, ಸೆ. 9: ರಾಜ್ಯದ ವಿವಿಧೆಡೆ ಪೊಲೀಸ್ ರೆಸಿಡೆನ್ಸಿ ಶಾಲೆ ತೆರೆಯಲು ರಾಜ್ಯ ಸರಕಾರದಿಂದ ಅನುದಾನ ಕೊಡಲು ಸಿದ್ಧವಿದ್ದೇವೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಭರವಸೆ ನೀಡಿದ್ದಾರೆ.
ರವಿವಾರ ಕೋರಮಂಗಲ ಕೆಎಸ್ಸಾರ್ಪಿ ಮೈದಾನದಲ್ಲಿ ಪೊಲೀಸ್ ಪಬ್ಲಿಕ್ ಶಾಲೆಯ ಡಾ.ಎಸ್.ರಾಧಕೃಷ್ಣ ಬ್ಲಾಕ್ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸ್ ಸಿಬ್ಬಂದಿಯ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕೆಂಬುದು ನಮ್ಮ ಹೆಬ್ಬಯಕೆ. ಹೀಗಾಗಿ ಇಂಥ ಸಾಕಷ್ಟು ಶಾಲೆಗಳು ತಲೆ ಎತ್ತಬೇಕು. ಪೊಲೀಸ್ ಸಿಬ್ಬಂದಿಯ ಮಕ್ಕಳಿಗಾಗಿಯೇ ರಾಜ್ಯದಲ್ಲಿ ರೆಸಿಡೆನ್ಸಿಯಲ್ ಶಾಲೆ ತೆರೆಯಲು ರಾಜ್ಯ ಸರಕಾರದಿಂದಲೂ ಸಹಕಾರ ನೀಡಲಾಗುವುದು ಎಂದು ಪರಮೇಶ್ವರ್ ಇದೇ ವೇಳೆ ಹೇಳಿದರು.
ಇಂದು ದೇಶದ ಸಾಕ್ಷರತ ಪ್ರಮಾಣ ಹೆಚ್ಚಿದೆ. ಶೇ.80ರಷ್ಟು ಸಾಕ್ಷರತ ಪ್ರಮಾಣ ತಲುಪಿದ್ದು, ಶಿಕ್ಷಣದಿಂದಲೇ ದೇಶದ ಆರ್ಥಿಕ ಸ್ಥಿತಿ ಬದಲಾಗಿದೆ. ನಮ್ಮ ದೇಶದಲ್ಲಿ ವರ್ಷಕ್ಕೆ 5ಲಕ್ಷ ಇಂಜಿನಿಯರ್ಗಳು ಹಾಗೂ 70 ಸಾವಿರಕ್ಕೂ ಹೆಚ್ಚು ವೈದ್ಯ ಶಿಕ್ಷಣ ಪಡೆದು ಹೊರಬರುತ್ತಿದ್ದಾರೆ. ಇಡೀ ವಿಶ್ವದಲ್ಲೆ ನಮ್ಮ ದೇಶದ ವೈದ್ಯರು, ವಿಜ್ಞಾನಿಗಳು, ಇಂಜಿನಿಯರ್ಗಳೇ ಹೆಚ್ಚಿದ್ದಾರೆ. ಇದಕ್ಕೆಲ್ಲ ಶಿಕ್ಷಣದಲ್ಲಾದ ಕ್ರಾಂತಿಯೇ ಕಾರಣ. ಶಿಕ್ಷಣ ಇಡೀ ಬದುಕನ್ನೇ ಬದಲಿಸಲಿದೆ. ಹೀಗಾಗಿ ಪ್ರತಿಯೊಬ್ಬರು ಉನ್ನತ ಶಿಕ್ಷಣ ಪಡೆದುಕೊಳ್ಳುವುದು ಮೂಲ ಹಕ್ಕಾಗಿದೆ ಎಂದರು.